ಪಟ್ಟಣದಲ್ಲಿ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ಸ್ಥಳೀಯ ಯುವಕರು ಸ್ಥಳೀಯ ಆಡಳಿತದ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ ಪಟ್ಟಣದ ವ್ಯಾಪ್ತಿಯ ತಾಲೂಕು ಕಚೇರಿ ಎದುರಿಗೆ ರಸ್ತೆಯ ಮಧ್ಯೆ ದೊಡ್ಡ ಗುಂಡಿ ಉಂಟಾಗಿತ್ತು. ಇದರ ಬಗ್ಗೆ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ವಾಹನ ಸವಾರರು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಕಂಡು ಮೂಡಿಗೆರೆ ಪಟ್ಟಣzಟೀಮ್ ಛತ್ರಮೈಧಾನ ತಂಡದ ಸದಸ್ಯರು ಸ್ವಂತ ಖರ್ಚಿನಲ್ಲಿ ಗುಂಡಿಗೆ ಕಾಂಕ್ರೀಟ್ ಹಾಕಿ ಮುಚ್ಚಿದ್ದಾರೆ.
ಕಳೆದ ವರ್ಷ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಪ.ಪಂ.ಯವರು ರಸ್ತೆ ಬಗೆದು ನೀರು ಪೂರೈಕೆ ಕಾಮಗಾರಿ ಅಂತ್ಯಗೊಳಿಸಿ ಕೇವಲ ಮಣ್ಣು ಹಾಕಿ ಗುಂಡಿ ಮುಚ್ಚಿಸಲಾಗಿತ್ತು. ವರ್ಷ ಕಳೆದರೂ ಗುಂಡಿಗೆ ಡಾಂಬಾರು ಅಥವಾ ಕಾಂಕ್ರೀಟ್ ಹಾಕಿ ದುರಸ್ತಿಪಡಿಸಿರಲಿಲ್ಲ. ಆ ಗುಂಡಿ ಬೃಹತ್ ಗಾತ್ರದಾಗಿ ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಗಿತ್ತು. ಈ ರಸ್ತೆಯಲ್ಲಿ ಪ.ಪಂ.ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರತಿನಿತ್ಯ ತಿರುಗಾಡುತ್ತಲೇ ಇರುತ್ತಾರೆ. ಆದರೆ ದುರಸ್ತಿಪಡಿಸುವ ಗೋಜಿಗೆ ಇದೂವರೆಗೂ ಹೋಗಿರಲಿಲ್ಲ.
ರಸ್ತೆ ಗುಂಡಿಯಿಂದ ಬೇಸತ್ತ ಪಟ್ಟಣದ ಟೀಮ್ ಛತ್ರಮೈಧಾನ ತಂಡದ ಯುವಕರು ಸರಕಾರದ ಯಾವುದೇ ಅನುದಾನ ಬಳಸದೇ ಸ್ವತಃ ಖರ್ಚಿನಿಂದ ಗುರುವಾರ ರಾತ್ರಿ ರಸ್ತೆ ದುರಸ್ತಿ ಕಾರ್ಯ ನಡೆಸಿದ್ದಾರೆ. ಯುವಕರ ತಂಡದ ಕಾರ್ಯಕ್ಕೆ ಪಟ್ಟಣದ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.