ಕೇಂದ್ರ ಸರ್ಕಾರವು ದೇಶದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಮುಂದಾಗಿರುವ ಹಿನ್ನಲೆಯಲ್ಲಿ ವಿವಿಧ ಕಡೆಗಳಲ್ಲಿ ಹೊಸ ಸಹಕಾರ ಸಂಘ ಸ್ಥಾಪನೆಗೆ ಚಟುವಟಿಕೆಗಳು ಪ್ರಾರಂಭವಾಗಿವೆ.
ಅದರ ಅಂಗವಾಗಿ ಇಂದು ಮೂಡಿಗೆರೆ ತಾಲ್ಲೂಕಿನ ನಂದೀಪುರದಲ್ಲಿ ನೂತನ ಸಹಕಾರ ಸಂಘ ಸ್ಥಾಪನೆಗೆ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು. ನಂದೀಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಗ್ರಾಮಗಳ ರೈತಾಪಿ ವರ್ಗದವರು ಸಭೆ ಸೇರಿ ಸಹಕಾರ ಸಂಘ ಸ್ಥಾಪನೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಜಿ.ಯು. ಚಂದ್ರೇಗೌಡ ಗಬ್ಬಳ್ಳಿ ಇವರು ಮಾತನಾಡಿದ ; ಪ್ರಸ್ತುತ ನಂದೀಪುರ ಗ್ರಾಮ ಪಂಚಾಯಿತಿಯು ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಇದೆ. ಇದೀಗ ಸರ್ಕಾರದ ಆದೇಶದಂತೆ ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪ್ರತ್ಯೇಕ ಸಹಕಾರ ಸಂಘವನ್ನು ಸ್ಥಾಪನೆ ಮಾಡಲು ಎಲ್ಲರೂ ಒಗ್ಗಟ್ಟಾಗಿ ಪಕ್ಷಬೇದ ಮರೆತು ಪ್ರಯತ್ನ ನಡೆಸುತ್ತಿದ್ದೇವೆ. ನಂದೀಪುರ ಗ್ರಾಮ ಪಂಚಾಯಿತಿ 10 ಗ್ರಾಮಗಳ ವ್ಯಾಪ್ತಿ ಹೊಂದಿದೆ. ಇಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ರೈತರು, ಎಸ್ಟೇಟ್ ಮಾಲೀಕರು, ಕೃಷಿ ಕಾರ್ಮಿಕರು ಇದ್ದಾರೆ. ಒಂದು ಸಹಕಾರ ಸಂಘ ನಡೆಸಲು ಬೇಕಾದ ಷೇರುದಾರರು ಇಲ್ಲಿ ಸುಲಭವಾಗಿ ಸಿಗುತ್ತಾರೆ. ಹೊಸ ಸಹಕಾರ ಸಂಘ ಸ್ಥಾಪನೆಯಿಂದ ಈ ಭಾಗದ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲರೂ ಒಮ್ಮನಸಿನಿಂದ ನೂತನ ಸಹಕಾರ ಸಂಘ ಸ್ಥಾಪನೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಂದೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್ ಗೌತುವಳ್ಳಿ ಮಾತನಾಡಿ ನೂತನ ಸಹಕಾರ ಸಂಘ ಸ್ಥಾಪನೆಗೆ ನಂದೀಪುರ ಗ್ರಾಮ ಪಂಚಾಯಿತಿ ಭಾಗದಲ್ಲಿ ಉತ್ತಮ ಅವಕಾಶವಿದೆ. ರೈತಾಪಿ ವರ್ಗದವರಿಗೆ ಇಂದು ಸಹಕಾರ ಸಂಘದಿಂದ ಅನೇಕ ಸೇವೆಗಳು ಲಭ್ಯವಿದೆ. ಅವುಗಳ ಸದುಪಯೋಗ ಆಗಬೇಕೆಂದರೆ ಸಮೀಪದಲ್ಲಿ ಸಹಕಾರ ಸಂಘ ಇರಬೇಕು. ಹಾಗಾಗಿ ನಂದೀಪುರದಲ್ಲಿ ನೂತನ ಸಹಕಾರ ಸಂಘ ಸ್ಥಾಪನೆಗೆ ಚಾಲನೆ ದೊರೆತಿರುವುದು ಉತ್ತಮ ಬೆಳವಣಿಗೆ, ಗ್ರಾಮ ಪಂಚಾಯಿತಿ ವತಿಯಿಂದ ನೂತನ ಸಹಕಾರ ಸಂಘ ಸ್ಥಾಪನೆಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ನಳಿನಿ ರಘುನಾಥ್, ಮುಖಂಡರುಗಳಾದ ಮಲ್ಲೇಶ್ ನಂದೀಪುರ, ರಘುನಾಥ್ ನಂದೀಪುರ, ಯೋಗೇಶ್ ಪುರ, ರಘು ಪುರ, ರೆಹಮಾನ್ ಇಂದ್ರವಳ್ಳಿ, ಸಂದೀಪ್ ನಂದೀಪುರ, ಕಿರಣ್ ಗೌತುವಳ್ಳಿ, ಪುಟ್ಟೇಗೌಡ ಗೌತುವಳ್ಳಿ, ಪರಮೇಶ್ ಗಬ್ಬಳ್ಳಿ, ಜಗನ್ನಾಥ್ ಮಾಲಳ್ಳಿ, ರಮೇಶ್ ಚಟ್ನಳ್ಳಿ, ಗಿರೀಶ್ ನಂದೀಪುರ, ಸಚಿನ್ ಸಂಗಮಪುರ, ಜಿ.ಟಿ.ಈರೇಗೌಡ ಗೌತುವಳ್ಳಿ, ಗೌತಮ್ ನಂದೀಪುರ, ಮಂಜೇಗೌಡ ಇಂದ್ರವಳ್ಳಿ, ನಂದೀಪುರ ಗ್ರಾಮ ಪಂಚಾಯಿತಿ ಸದಸ್ಯರುಗಳು, ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ರೈತ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.