ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನೆ ಮಹೋತ್ಸವ ಮಂಗಳವಾರ ನೆರವೇರಿತು.
ಶ್ರೀ ದುರ್ಗಾ ಸೇವಾ ಸಮಿತಿಯಿಂದ ಶ್ರೀ ದುರ್ಗಾ ಮಾತೆ ದೇವಿ ವಿಗ್ರಹ ಪ್ರತಿಷ್ಠಾಪಿಸಿ 9 ದಿನಗಳ ಕಾಲ ದೇವಿಯ ವಿವಿಧ ರೂಪವನ್ನು ಆರಾಧಿಸುವ ಮೂಲಕ ಅರ್ಥಪೂರ್ಣವಾಗಿ ದೇವಿಯ ಆರಾಧನೆಯನ್ನು ನೆರವೇರಿಸಲಾಯಿತು.
ನವರಾತ್ರಿಯ ಕೊನೆಯ ದಿನ ಮಂಗಳವಾರ ವಿಜಯದಶಮಿಯಂದು ಶ್ರೀ ದುರ್ಗಾದೇವಿಯನ್ನು ದೀಪಾಲಂಕಾರಗೊAಡಿದ್ದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸುವ ಮೂಲಕ ಸುಂಡೆಕೆರೆ ಹಳ್ಳದಲ್ಲಿ ವಿಸರ್ಜಿಸಲಾಯಿತು.
ವಿಸರ್ಜನೆಗೂ ಮುನ್ನ ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಬಸ್ ನಿಲ್ದಾಣದ ಬಳಿ ಅಸುರ ಶಕ್ತಿ ಸಂಹಾರ ಮಾಡುವ ಮೂಲಕ ಸುಂಡಕೆರೆ ಹಳ್ಳಕ್ಕೆ ತೆರಳಿ ಅಲ್ಲಿ, ದೇವಿಗೆ ವಿವಿಧ ಪೂಜಾ ಕಾರ್ಯ ನೆರವೇರಿಸಿದ ಬಳಿಕ ಶ್ರೀ ದುರ್ಗಾದೇವಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ಶ್ರೀ ದುರ್ಗಾದೇವಿ ಮೆರವಣಿಗೆ ವೀಕ್ಷಿಸಲು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಶ್ರೀ ದುರ್ಗಾದೇವಿ ವಿಸರ್ಜನೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.