ಕಳಸ-ಹೊರನಾಡು ನಡುವಿನ ಹೆಬ್ಬೊಳೆ ಸಮೀಪ ಭದ್ರಾ ನದಿಯಲ್ಲಿ ಈಜಲು ಹೋದ ಬೆಂಗಳೂರು ಮೂಲದ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ದುರ್ಘಟನೆ ಇಂದು ನಡೆದಿದೆ
ರಜೆ ನಿಮಿತ್ತ ಶ್ರೀ ಕ್ಷೇತ್ರ ಹೊರನಾಡಿಗೆ ಸೋಮವಾರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಮೂವರು ಯುವಕರ ತಂಡ ಇಂದು ಬೆಂಗಳೂರಿಗೆ ವಾಪಸ್ ಹೊರಟಿತ್ತು. ಹೆಬ್ಬೊಳೆ ಸೇತುವೆಯ ಬಳಿ ಬಂದಾಗ ಭದ್ರಾ ನದಿಯ ಆಕರ್ಷಣೆಯಿಂದ ಸ್ನಾನ ಮಾಡಲು ಯುವಕರು ನೀರಿಗೆ ಇಳಿದಿದ್ದಾರೆ.
ಆಗ ಗೋಕುಲ್ (25 ವರ್ಷ) ಎಂಬ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ. ಗೆಳೆಯರು ಗೋಕುಲ್ ನನ್ನು ರಕ್ಷಿಸಲು ಪ್ರಯತ್ನಿಸಿದ್ದರಾದರೂ ಯತ್ನ ಫಲ ನೀಡಿಲ್ಲ.
ನೀರಿನಲ್ಲಿ ಮುಳುಗಿದ ಗೋಕುಲ್ ಕೊನೆಯುಸಿರೆಳೆದಿದ್ದಾನೆ. ಕಳಸ ಠಾಣೆಗೆ ಸುದ್ದಿ ಮುಟ್ಟಿಸಿದ ನಂತರ ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದಿದ್ದಾರೆ. ಪೊಲೀಸ್ ಸಿಬ್ಬಂದಿ ಗೋಕುಲ್ ಅವರ ಶವ ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ.
ಗೋಕುಲ್ ಬೆಂಗಳೂರಿನ ಶ್ರೀನಗರ ಮೂಲದವರು ಎಂದು ತಿಳಿದುಬಂದಿದೆ. ಭದ್ರಾನದಿಯಲ್ಲಿ ಪ್ರತಿವರ್ಷ ಇಂತಹ ದುರ್ಘಟನೆಗಳು ಮರುಕಳಿಸುತ್ತಿದ್ದು, ಯುವಕರು ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ.