ಚಿಕ್ಕಮಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಕಳೆದ ಎರಡು ತಿಂಗಳಿಂದ ವಾಹನ ನೊಂದಣಿ, ಮಾಲೀಕತ್ವ ವರ್ಗಾವಣೆಯಾಗಬೇಕಾಗಿರುವ ಸಲ್ಲಿಕೆಯಾದ ಅರ್ಜಿಗಳಿಗೆ ನೊಂದಣಿ ಪತ್ರ (ಸ್ಮಾರ್ಟ್ ಕಾರ್ಡ್) ವಿತರಣೆ ಮಾಡದೆ ವಾಹನ ಮಾಲೀಕರು ಪರದಾಡುವಂತಾಗಿದೆ ಎಂದು ವಕೀಲ ಡಿ.ಕೆ.ಪ್ರಸನ್ನ ಕುಮಾರ್ ಹಾಗೂ ಅಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಅಮರ್ನಾಥ್ ದೂರಿದ್ದಾರೆ.
ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಅವರು, ಸಾಗರದಿಂದ ಚಿಕ್ಕಮಗಳೂರು ಸಾರಿಗೆ ಇಲಾಖೆಗೆ ರಾಕೇಶ್ ಎಂಬುವರು ಪ್ರಭಾರ ಆರ್ಟಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಇಲ್ಲಿಗೆ ಬಂದ ಮೇಲೆ ಸ್ಮಾರ್ಟ್ ಕಾರ್ಡ್ ವಿತರಣೆ ಬಗ್ಗೆ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ ವಹಿಸಿರುವುದರಿಂದ ವಾಹನ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.
ಪ್ರತಿನಿತ್ಯ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರ್ಸಿ ಸ್ಮಾರ್ಟ್ ಕಾರ್ಡ್ ಅಗತ್ಯವಾಗಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ವಾಹನ ಮಾಲೀಕರು ದಂಡ ಕಟ್ಟುವ ಪರಿಸ್ಥಿತಿ ಎದುರಾಗಿದೆ.
ಸರಕು ಸಾಗಾಣಿಕೆ ವಾಹನಗಳು ಹಾಗೂ ತರಕಾರಿ ವಾಹನಗಳು ಹೊರ ರಾಜ್ಯಕ್ಕೆ ತೆರಳಬೇಕಾದರೆ ಸ್ಮಾರ್ಟ್ ಕಾರ್ಡ್ ಇಲ್ಲದಿದ್ದರೆ ಸರಕು ಸಾಗಾಗಣಿಕೆಗೆ ತೀವ್ರ ತೊಂದರೆ ಉಂಟಾಗುತ್ತದೆ. ವಕೀಲ ಡಿ.ಕೆ.ಪ್ರಸನ್ನಕುಮಾರ್ ಅವರ ವಾಹನದ ನೋಂದಣಿ ನವೀಕರಣ ಮಾಡಿ, ಒಂದುವರೆ ತಿಂಗಳ ಕಳೆದರೂ ಅರ್ಸಿ ಕಾರ್ಡ್ ಇದುವರೆಗೂ ಬಂದಿರುವುದಿಲ್ಲ ಆರ್ಟಿಓ ಇಲಾಖೆಯಲ್ಲಿ ವಿಚಾರಿಸಿದರೆ ರಿಬ್ಬನ್ ಇಲ್ಲ ಮತ್ತು ಕಾರ್ಡ್ ಸ್ಟಾಕ್ ಇಲ್ಲ ಎಂಬ ಉತ್ತರ ನೀಡುತ್ತಾರೆ.
ಸಾರಿಗೆ ಇಲಾಖೆಯ ಬೇಜವಾಬ್ದಾರಿಯಿಂದಾಗಿ ವಾಹನ ಮಾಲೀಕರು ಪರದಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.