ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರೊ|| ಕೆ.ಎನ್. ಭಗವಾನ್ರವರನ್ನು ಬಂಧಿಸುವಂತೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ರವರಿಗೆ ಮನವಿ ನೀಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮನವಿ ನೀಡಿ ಮಾತನಾಡಿ ಫ್ರೋ. ಕೆ.ಎಸ್.ಭಗವಾನ್ ರವರು ಒಕ್ಕಲಿಗರ ಸಮುದಾಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದಲ್ಲದೇ, ಅವಾಚ್ಯವಾಗಿ ಸಮುದಾಯವನ್ನು ನಿಂಧಿಸಿರುವುದಕ್ಕೆ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘವು ತೀವ್ರವಾಗಿ ಖಂಡಿಸಿ, ರಾಜ್ಯ ಸರ್ಕಾರ ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಲಾಗಿದ್ದು, ಅವರ ಬಂಧನ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಭಗವಾನ್ರನ್ನು ಕೂಡಲೇ ಬಂಧಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದರ ಜೊತೆಗೆ ಅಕ್ಟೋಬರ್ 20 ರಂದು ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಒಕ್ಕಲಿಗ ಸಮುದಾಯ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಪ್ರಭಾವಗಳ ಹಿನ್ನೆಲೆಯಲ್ಲಿದ್ದು, ಈ ಜನಾಂಗವನ್ನು ಕೇವಲ ಪ್ರಚಾರಕ್ಕಾಗಿ ಅವಹೇಳನ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಆರೋಪಿಸಿದ್ದಾರೆ.
ಇಂತಹ ಹೇಳಿಕೆಯನ್ನು ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳುಮಾಡಲು ಮುಂದಾಗಿರುವ ಭಗವಾನ್ರವರನ್ನು ಗಡಿಪಾರು ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಉಪಾಧ್ಯಕ್ಷರಾದ ಲಕ್ಷ್ಮಣ್ಗೌಡ, ನಿರ್ದೇಶಕರಾದ ಟಿ.ಡಿ.ಮಲ್ಲೇಶ್, ಶ್ರೀಧರ್, ಮನುಕುಮಾರ್, ದಿನೇಶ್, ತ್ರಿಲೋಕ್, ಸತೀಶ್, ನವೀನ್, ರುದ್ರೇಗೌಡ, ಆರತಿ, ಸುಜಿತ್, ದಿನೇಶ್, ಮಂಜುನಾಥ್, ಪೃಥ್ವಿತಾಜ್, ನಾರಾಯಣಗೌಡ, ಆನಂದ್ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಸವಿತಾರಮೇಶ್, ಉಪಾಧ್ಯಕ್ಷರಾದ ಸ್ಮಿತಾಸುರೇಶ್, ಗೌರವಕಾರ್ಯದರ್ಶಿ ಜಾನವಿಜಯರಾಮ್, ಸಂಘದ ವ್ಯವಸ್ಥಾಪಕ ರಾಜು ಉಪಸ್ಥಿತರಿದ್ದರು.