ವಾಹನ ಸವಾರರನ್ನು ಗಲಿಬಿಲಿಗೊಳಿಸುತ್ತಿದ್ದ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದ್ದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ರೋಟರಿ ವೃತ್ತಕ್ಕೆ ಮೂಡಿಗೆರೆ ರೋಟರಿ ವತಿಯಿಂದ ಸೂಚನಫಲಕ ಅಳವಡಿಸಲಾಗಿದೆ.
ಪ್ರಮುಖ ಆಯಾಕಟ್ಟಿನ ವೃತ್ತವಾಗಿರುವ ಹ್ಯಾಂಡ್ ಪೋಸ್ಟ್ ರೋಟರಿ ವೃತ್ತದಲ್ಲಿ ವಾಹನ ಸವಾರರು ಯಾವ ಕಡೆ ಸಂಚರಿಸುವುದು ಎಂಬುದು ತಿಳಿಯದೆ ತಬ್ಬಿಬ್ಬಾಗುತ್ತಿದ್ದರು. ಮಂಗಳೂರು, ಧರ್ಮಸ್ಥಳ, ಹೊರನಾಡು, ಹಾಸನ, ಚಿಕ್ಕಮಗಳೂರು, ಬೆಂಗಳೂರು ಮುಂತಾದ ಕಡೆಗಳಿಗೆ ಸಂಚರಿಸುವ ಮಾರ್ಗಗಳು ಈ ವೃತ್ತದ ಮೂಲಕವೇ ಹಾದು ಹೋಗುತ್ತವೆ. ಸದಾ ಗಿಜಿಗುಡುವ ವಾಹನ ಸಂಚಾರ ಇರುವುದರಿಂದ ಪ್ರವಾಸಿಗರು ಈ ವೃತ್ತದ ಬಳಿ ಬಂದಾಗ ಯಾವ ಕಡೆ ಹೋಗುವುದು ಎಂದು ತಿಳಿಯದೇ ಗೊಂದಲಕ್ಕೆ ಈಡಾಗುತ್ತಿದ್ದರು. ಅನೇಕ ಸಂದರ್ಭದಲ್ಲಿ ಇಲ್ಲಿ ಅಪಘಾತಗಳು ಸಂಭವಿಸಿದ್ದವು.
ಹಿಂದೆ ಮೂಡಿಗೆರೆ ರೋಟರಿ ಸಂಸ್ಥೆಯವರು ನಿರ್ಮಿಸಿದ್ದ ವೃತ್ತ ಮತ್ತು ಸೂಚನಫಲಕವನ್ನು ತೆರವುಗೊಳಿಸಿ ಕಳೆದ ವರ್ಷ ಕಳಶ ಆಕೃತಿಯಲ್ಲಿ ವೃತ್ತವನ್ನು ಮಾರ್ಪಾಟು ಮಾಡಿದ ನಂತರ ಇಲ್ಲಿ ಸೂಕ್ತವಾದ ಸೂಚನ ಫಲಕಗಳನ್ನು ಅಳವಡಿಸದೇ ಇದ್ದುದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿತ್ತು.
ಆದರೆ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮ ಜರುಗಿಸಿರಲಿಲ್ಲ. ಇದೀಗ ವಾಹನ ಸವಾರರ ಪರದಾಟವನ್ನು ಕಂಡು ಕೊನೆಗೆ ಮೂಡಿಗೆರೆ ರೋಟರಿ ಸಂಸ್ಥೆಯ ವತಿಯಿಂದಲೇ ವೃತ್ತದ ಸುತ್ತ ಸೂಚನಾ ಫಲಕ ಅಳವಡಿಸಿದ್ದಾರೆ.
ಇದರಿಂದ ವಾಹನ ಸವಾರರಿಗೆ ತುಂಬಾ ಅನುಕೂಲವಾಗಿದೆ. ಉತ್ತಮ ಕಾರ್ಯ ನೆರವೇರಿಸಿದ ಮೂಡಿಗೆರೆ ರೋಟರಿ ಅಧ್ಯಕ್ಷ ಕೆ.ಎಲ್.ಎಸ್. ತೇಜಸ್ವಿ ಮತ್ತು ಪದಾಧಿಕಾರಿಗಳನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.