ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸಂಚರಿಸುತ್ತಿರುವ ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಜಪ್ತಿ ಮಾಡುವಂತೆ ಒತ್ತಾಯಿಸಿ ಶ್ರೀ ರಾಮಸೇನೆ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.
ಜಿಲ್ಲೆಯ ಪ್ರವಾಸಿ ತಾಣವಾದ ದತ್ತಪೀಠ, ಮುಳ್ಳಯ್ಯನಗಿರಿ ಭಾಗದಲ್ಲಿ ಪ್ರತಿನಿತ್ಯ ಸುಮಾರು 120ಕ್ಕೂ ಹೆಚ್ಚು ಜೀಪುಗಳು ಪ್ರವಾಸಿಗರನ್ನು ಅನೇಕ ಸ್ಥಳಗಳಿಗೆ ಕರೆದೊಯ್ಯುತ್ತಿದ್ದು, ಈ ವಾಹನಗಳ ಚಾಲಕರು ಪ್ರವಾಸಿಗರಿಗೆ ದಬ್ಬಾಳಿಕೆ ಮಾಡಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವಾಹನಗಳಿಗೆ ಯಾವುದೇ ದಾಖಲೆಗಳಿಲ್ಲ ಹಾಗೂ ಸಂಚಾರಕ್ಕೆ ಸೂಕ್ತವಲ್ಲದ ವಾಹನಗಳ ಬಗ್ಗೆ ಶ್ರೀ ರಾಮಸೇನೆ ವತಿಯಿಂದ ಕಳೆದ 2 ವರ್ಷದ ಹಿಂದೆ ಹೋರಾಟದ ಫಲವಾಗಿ 40 ವಾಹನಗಳನ್ನು ಪೊಲೀಸ್ ಇಲಾಖೆ ಜಪ್ತಿ ಮಾಡಿದ್ದು, ಮತ್ತೆ ವಾಹನಗಳು ಸಂಚರಿಸುವುದು ಗಮನಕ್ಕೆ ಬಂದಿದೆ. ಪ್ರವಾಸಿಗರು ಹಾಗೂ ಅಲ್ಲಿನ ಸ್ಥಳೀಯರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಜಪ್ತಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪ್ರೋ ಭಗವಾನ್ ಗಡಿಪಾರಿಗೆ ಆಗ್ರಹ:
ಹಿಂದೂ ಧರ್ಮದ ಬಗ್ಗೆ ಹಾಗೂ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಹಾಗೂ ಒಕ್ಕಲಿಗ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಹಿಂದೂ ಸಮಾಜಕ್ಕೆ ಹಾಗೂ ಒಕ್ಕಲಿಗ ಸಮುದಾಯದ ಭಾವನೆಗೆ ಧಕ್ಕೆಯಾಗಿದ್ದು, ಪ್ರೋ ಭಗವಾನ್ ರಾಜ್ಯದಿಂದ ಗಡಿಪಾರು ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಾ, ಚಿಕ್ಕಮಗಳೂರು ನಗರಕ್ಕೆ ಬರದಂತೆ ನಿರ್ಬಂಧ ಮಾಡಬೇಕಾಗಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ವಿಭಾಗ ಅಧ್ಯಕ್ಷ ರಂಜಿತ್ ಶೆಟ್ಟಿ, ಜಿಲ್ಲಾಧ್ಯಕ್ಷ ಜ್ಞಾನೇಂದ್ರ ಜೈನ್, ಯೋಗಿ ಸಂಜೀತ್ ಸುವರ್ಣ, ವೆಂಕಟೇಶ್, ನವೀನಾರಂಜಿ, ಮೈನಾ, ಚಿತ್ರಾ, ಆರತಿ, ಮೀನಾಕ್ಷಿ, ಕೋಮಲ, ಪ್ರತಿಮಾಶರತ್ಕುಮಾರ್, ಮನೀಶಾ ಶೆಟ್ಟಿ, ವರುಣ್ ಮತ್ತಿತರರಿದ್ದರು.