ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿರುವ ಜನರ, ರೈತಾಪಿ ರ್ಗದವರ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಪಕ್ಷಾತೀತವಾದ ಸಂಘಟನೆ ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕರಾವಳಿ ಮಲೆನಾಡು ಜನಪರ ಒಕ್ಕೂಟ ಹುಟ್ಟುಹಾಕಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ತಿಳಿಸಿದ್ದಾರೆ.
ಅವರು ಶನಿವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಮಲೆನಾಡು ಜನಪರ ಒಕ್ಕೂಟ ಸ್ಥಾಪನೆ ಮಾಡಿ ಅದರಿಂದ ಜನರ ಸಮಸ್ಯೆಗಳ ನಿವಾರಣೆಗೆ ಅನೇಕ ಹೋರಾಟ ನಡೆಸಲಾಗಿತ್ತು. ಇದನ್ನು ಈಗ ವಿಸ್ತರಣೆ ಮಾಡುವ ದೃಷ್ಟಿಯಿಂದ ಮಂಗಳೂರು ಹೆದ್ದಾರಿ ಬಲಭಾಗ ಕರಾವಳಿ, ಎಡಭಾಗ ಸಹ್ಯಾದ್ರಿ ಶ್ರೇಣಿ ಮಲೆನಾಡು ಪ್ರದೇಶವಾಗಿರುವ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಸನ, ಕೊಡಗು ಭಾಗದ ಜನರ, ಕೂಲಿ ಕಾರ್ಮಿಕರ, ಬೆಳೆಗಾರರ ಸಮಸ್ಯೆ ಬಗೆಹರಿಸಲು ಕರಾವಳಿ ಮಲೆನಾಡು ಜನಪರ ಒಕ್ಕೂಟ ಹುಟ್ಟುಹಾಕಲಾಗಿದೆ ಎಂದು ಹೇಳಿದರು.
ಅಕ್ಟೋಬರ್ 31ರಂದು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸರ್ವಪಕ್ಷ ಹಾಗೂ ಎಲ್ಲಾ ಸಂಘಟನೆ ಮುಖಂಡರನ್ನೊಳಗೊಂಡ ಸಭೆ ನಡೆಸಿ, ನೀಲಿನಕ್ಷೆ ತಯಾರಿಸಿ ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಸನ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ಒದಗಿಸಲು, ರೈತರ ಸಮಸ್ಯೆ, ಕರಾವಳಿ ಭಾಗದ ಮೀನುಗಾರರ ಸಮಸ್ಯೆ, ಸಾರಿಗೆ ವಾಹನ ಚಾಲಕರ, ಕೂಲಿ ಕಾರ್ಮಿಕರ ಸಮಸ್ಯೆ ಬಹಳಷ್ಟಿವೆ. ಧಾರವಾಡ, ಕುಲ್ಬರ್ಗಿಯಲ್ಲಿ ಹೈಕೋರ್ಟ್ ಪೀಠವಿದ್ದು, ಮಲೆನಾಡು ಕರಾವಳಿ ಭಾಗದಲ್ಲೂ ಹೈಕೋರ್ಟ್ ಪೀಠ ಅವಶ್ಯಕತೆಯಿದೆ. ಜನರ ಬದುಕು, ಭಾವನೆ ಪ್ರಶ್ನೆ ಬಂದಾಗ, ಬದುಕು ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಈ ಹಿನ್ನಲೆಯಲ್ಲಿ ಅಕ್ಟೋಬರ್ 31ರಂದು ನಡೆಯುವ ಸಭೆಗೆ ರೈತರು, ನಿವೃತ್ತ ಪ್ರೋಫೇಸರ್, ವಕೀಲರು, ಸರ್ವ ಪಕ್ಷ ಹಾಗೂ ಸಂಘಟನೆಯ ಮುಖಂಡರು ಆಗಮಿಸಲಿದ್ದು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸಲಾಗುವುದು ಎಂದು ಹೇಳಿದರು.
ಒಕ್ಕೂಟದ ಸಂಚಾಲಕರಾದ ಅನಿಲ್ ಹೊಸಕೊಪ್ಪ, ಬಿ.ಎಂ.ಸಂದೀಪ್, ಮುಖಂಡರಾದ ಬಿ.ಎಸ್.ಜಯರಾಂ, ಎಚ್.ಜಿ.ಸುರೇಂದ್ರ, ಕಲ್ಪನಾ ಶ್ರೀನಿವಾಸ್, ನವೀನ್ ಮಾವಿನಕಟ್ಟೆ, ಎ.ಜಿ. ಸುಬ್ರಾಯಗೌಡ, ಸಂಪತ್ ಬಿಳಗುಳ, ನವೀನ್ ಕರಾವಳಿ, ಉಮರ್ ಬಣಕಲ್, ದೀಕ್ಷಿತ್ ಕಣಚೂರು, ಸಂತೋಷ್, ವಿಜೇಂತೇಶ್ಶೆಟ್ಟಿ, ಶುಭಕೃತ್ ಹೆಗಡೆ ಮತ್ತಿತರರಿದ್ದರು.