ರಾಜ್ಯದಲ್ಲಿ ಹಿರಿಯ ನಾಗರೀಕರಿಗೆ ನೀಡುತ್ತಿರುವ ವೃದ್ಯಾಪ್ಯ ವೇತನದ ಮೊತ್ತವನ್ನು ಮುಂದಿನ ಬಜೆಟ್ ನಲ್ಲಿ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿರುತ್ತಾರೆ.
ಅವರು ನಿನ್ನೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ 60 ವರ್ಷದ ಮೇಲ್ಪಟ್ಟ ಬಡ ಕುಟುಂಬದ ಹಿರಿಯ ನಾಗರೀಕರಿಗೆ ಸರಕಾರದ ವತಿಯಿಂದ ಪ್ರಸ್ತುತ ನೀಡುತ್ತಿರುವ ರೂ. 1200 ರೂ. ಮೊತ್ತವನ್ನು ರೂ. 2000 ರೂಗಳಿಗೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು. ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ವೃದ್ದರಿಗೆ ಈಗಿನ ಮಾಸಾಶನ ಮೊತ್ತವನ್ನು ಹೆಚ್ಚಳ ಮಾಡಬೇಕು. ಇದರಿಂದ ಅವರಿಗೆ ಅನುಕೂಲವಾಗುತ್ತದೆ ಎಂದು ಸಚಿವೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ವೃದ್ಧರಿಗೆ ರೂ. 2 ಸಾವಿರ ರೂಪಾಯಿ ಮಾಶಾಸನ ನೀಡುವಂತೆ ಸಚಿವೆ ಮಾಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮುಂದಿನ ಬಜೆಟ್ ನಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುತ್ತಾರೆ. ಆದರೆ ಎಷ್ಟು ಮೊತ್ತ ಹೆಚ್ಚಿಸಲಾಗುವುದು ಎಂಬುದನ್ನು ಈಗ ಹೇಳಲಾಗುವುದಿಲ್ಲ ಎಂದರು.
ಪ್ರಸ್ತುತ ರಾಜ್ಯದಲ್ಲಿ ಸುಮಾರು 48 ಲಕ್ಷ ಮಂದಿಗೆ ಪ್ರತಿ ತಿಂಗಳು ತಲಾ 1200 ರೂ.ಗಳ ವೃದಾಪ್ಯವೇತನ ನೀಡಲಾಗುತ್ತಿದೆ. ಇದನ್ನು ಮುಂದಿನ ಬಜೆಟ್ ನಂತರ ಹೆಚ್ಚಳ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಸುಳಿವು ನೀಡಿದ್ದಾರೆ.