ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಯೊಬ್ಬರಿಗೆ ಗುದ್ದಿ ಪರಾರಿಯಾಗಿದ್ದ ಜಿಪ್ಸಿಯನ್ನು ಪೊಲೀಸರು ಬೆನ್ನಟ್ಟಿ ಹಿಡಿದು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪಟ್ಟಣದ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದು ಜಿಪ್ಸಿ ಚಾಲಕ ಪರಾರಿಯಾದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಬಣಕಲ್ ಸಮೀಪದ ಮತ್ತಿಕಟ್ಟೆ ಮೂಲದ ಯುವಕ ಬಿ.ಎಸ್. ವಿನಯ್ ಎಂಬುವವರು ಬಣಕಲ್ ಪಟ್ಟಣದಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಮೂಡಿಗೆರೆ ಕಡೆಯಿಂದ ಕೊಟ್ಟಿಗೆಹಾರ ಕಡೆಗೆ ಜಿಪ್ಸಿ ವಾಹನದಲ್ಲಿ ವೇಗವಾಗಿ ಬಂದ ಚಾಲಕ ವಿನಯ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಕೂಡಲೇ ಸ್ಥಳದಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬಣಕಲ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮ ಊರು ಬಣಕಲ್ ವಾಟ್ಸ್ ಅಪ್ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿ ಬಣಕಲ್ ಪೊಲೀಸರ ಸಹಕಾರದೊಂದಿಗೆ ಪರಾರಿಯಾದ ಜಿಪ್ಸಿಯ ಪತ್ತೆಗೆ ಯತ್ನಿಸಿದ್ದಾರೆ. ಬಾಳೂರು ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಕೊಟ್ಟಿಗೆಹಾರ, ಬಾಳೂರು, ನಿಡುವಾಳೆ, ಗಬ್ಗಲ್, ಹೆಮ್ಮಕ್ಕಿ, ಹಿರಬೈಲ್, ಬಿಳಗಲಿ ಬಳಿ ವಾಹನಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಬಾಳೂರು ಠಾಣೆ ಬಳಿ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬ್ಯಾರಿಕೇಡಿಗೆ ಗುದ್ದಿ ಜಿಪ್ಸಿ ಮುಂದೆ ಹೋಗಿದ್ದು 112 ಪೊಲೀಸರು ಕಾರ್ಯಾಚರಣೆ ನಡೆಸಿ ಬಿಳಗಲಿ ಬಳಿ ಜಿಪ್ಸಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ವ್ಯಕ್ತಿ ಮಡಿಕೇರಿ ಮೂಲದ ಮದುಸೂದನ್ ಎಂದು ತಿಳಿದುಬಂದಿದೆ. ಅವರು ಕೊಪ್ಪದಲ್ಲಿ ಆಯೋಜನೆಗೊಂಡಿದ್ದ ಜೀಪ್ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎನ್ನಲಾಗಿದೆ. ಆರೋಪಿಯ ಮೇಲೆ ಹಿಟ್ ಅಂಡ್ ರನ್ ಕೇಸು ದಾಖಲಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮತ್ತಿಕಟ್ಟೆಯ ಶಿವಪ್ಪ ಎಂಬುವವರು ಬಣಕಲ್ ಠಾಣೆಗೆ ದೂರು ನೀಡಿದ್ದು ಅಪಘಾತ ಮಾಡಿರುವ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯುವಕನ ಸ್ಥಿತಿ ಗಂಭೀರ : ಈ ನಡುವೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಜಿಪ್ಸಿ ವೇಗವಾಗಿ ಡಿಕ್ಕಿ ಹೊಡೆದದ್ದರಿಂದ ತೀವ್ರವಾಗಿ ಗಾಯಗೊಂಡಿದ್ದು, ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡಿರುವ ವಿನಯ್ ಮತ್ತಿಕಟ್ಟೆ ಮೂಲದವರು ಎಂದು ತಿಳಿದುಬಂದಿದ್ದು, ಬಣಕಲ್ ನಲ್ಲಿ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.