ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರಿ ಮಾಡಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮೂಡಿಗೆರೆ ತಹಸೀಲ್ದಾರ್ ವೈ.ತಿಪ್ಪೇಸ್ವಾಮಿಯವರು ಮೂಡಿಗೆರೆ ಠಾಣೆಗೆ ನೀಡಿದ ದೂರಿನನ್ವಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಈ ಹಿಂದೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಪ್ರಭಾರ ರೆವೆನ್ಯೂ ಇನ್ಸ್ ಪೆಕ್ಟರ್ ಮತ್ತು ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಗಿರೀಶ್ ಮತ್ತು ಭೂಮಿ ಆಪರೇಟರ್ ನೇತ್ರಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮೂಡಿಗೆರೆ ಈ ಹಿಂದಿನ ತಹಸೀಲ್ದಾರ್ ಆಗಿದ್ದ ರಮೇಶ್ ಮತ್ತು ಆರ್.ಆರ್.ಟಿ. ಶಿರಸ್ತೇದಾರ್ ಪಾಲಯ್ಯ ಎಂಬುವವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ ? :
2019ರಿಂದ 2021ರ ಅವಧಿಯಲ್ಲಿ ಮೂಡಿಗೆರೆಯಲ್ಲಿ ರಮೇಶ್ ಎಂಬುವವರು ತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಬಾಳೂರು ಹೋಬಳಿ ವ್ಯಾಪ್ತಿಯ ಹಾದಿಯೋಣಿ ಗ್ರಾಮದ ಸರ್ವೆ ನಂ 21ರಲ್ಲಿ 7 ಮಂದಿ ಹಾಗೂ ಕೂವೆ ಗ್ರಾಮದ ಸರ್ವೆ.ನಂ 164, 180, ಕೆಳಗೂರು ಗ್ರಾಮದ ಸರ್ವೆ ನಂ 41, ಬಿಳಗಲಿ ಗ್ರಾಮದ ಸರ್ವೆ ನಂ 87 ಈ ಪ್ರದೇಶದಲ್ಲಿ ಅನೇಕ ಮಂದಿಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಡಲಾಗಿತ್ತು. ಅರ್ಜಿ ಇಲ್ಲದೇ, ಅಕ್ರಮ ಸಕ್ರಮ ಸಮಿತಿಯ ಮುಂದೆ ಮಂಡಿಸದೇ, ಹಕ್ಕುಪತ್ರ ನೀಡದೇ ನೇರವಾಗಿ ಮ್ಯುಟೇಷನ್ ಮತ್ತು ಪಹಣಿಯನ್ನು ಮಾಡಿಕೊಡಲಾಗಿತ್ತು.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು ಕೆಲವು ಅಕ್ರಮ ಖಾತೆಗಳನ್ನು ರದ್ದುಗೊಳಿಸಿದ್ದರು. ಈ ಸಂಬಂಧ ಅಕ್ರಮ ಎಸಗಿದ್ದ ತಹಸೀಲ್ದಾರ್ ಮತ್ತು ನೌಕರರ ವಿರುದ್ಧ ಪ್ರಕರಣ ದಾಖಲಿಸುವಂತೆ ಮೂಡಿಗೆರೆ ತಹಸೀಲ್ದಾರ್ ರವರಿಗೆ ಉಪವಿಭಾಗಾಧಿಕಾರಿಗಾಳಾದ ರಾಜೇಶ್ ಅವರು ನೀಡಿದ ನಿರ್ದೇಶನ ಮೇರೆಗೆ ಮೂಡಿಗೆರೆ ಠಾಣೆಯಲ್ಲಿ ತಹಸಿಲ್ದಾರ್ ತಿಪ್ಪೇಸ್ವಾಮಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು.
ಗಿರೀಶ್ ಹಾಗೂ ನೇತ್ರ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂದಿಸಿದ್ದಾರೆ. ಗ್ರಾಮ ಲೆಕ್ಕಿಗ ಗಿರೀಶ್ ಈ ಹಿಂದೆಯೂ ಒಮ್ಮೆ ಅಕ್ರಮ ಭೂ ಮಂಜೂರಾತಿ ಆರೋಪದ ಮೇಲೆ ಅಮಾನತ್ತುಗೊಂಡಿದ್ದರು. ಹಿಂದೆ ಇದ್ದ ತಹಸೀಲ್ದಾರ್ ರಮೇಶ್ ಅವರು ಸ್ಥಳ ನಿರೀಕ್ಷಣೆಯಲ್ಲಿದ್ದು, ಮೂಡಿಗೆರೆಯಲ್ಲಿ ಆರ್.ಆರ್.ಟಿ. ಶಿರಸ್ತೆದಾರರಾಗಿದ್ದ ಪಾಲಯ್ಯ ಅವರು ಜಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಪ್ರಸ್ತುತ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.