ಮೂಡಿಗೆರೆ ತಾಲ್ಲೂಕು ಬಿ.ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಲ್ಗುಣಿ ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಶನಿವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಎಸ್. ರಕ್ಷಿತ್ ಬಡವನದಿಣ್ಣೆ ಮಾತನಾಡಿ ನಮ್ಮ ಸಹಕಾರ ಸಂಘವು 1976ರಲ್ಲಿ ಪ್ರಾರಂಭವಾಗಿದ್ದು, 10 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಸಂಘದಲ್ಲಿ 2820 ಜನ ಸದಸ್ಯರಿದ್ದಾರೆ. ಸಂಘವು 2022-23ನೇ ಸಾಲಿನಲ್ಲಿ ಒಟ್ಟು 25.84 ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸೆದೆ.
ಸಂಘದಿಂದ ರೈತರಿಗೆ ಹಿಂದಿನ ಸಾಲಿನಲ್ಲಿ 1560.27 ಲಕ್ಷ ರೂ. ಕೆ.ಸಿ.ಸಿ.ಸಾಲ ಹಾಗೂ 204.78 ಲಕ್ಷ ರೂ. ಸ್ವಂತ ಬಂಡವಾಳ ಸಾಲ ವಿತರಿಸಲಾಗಿದೆ. ಸಂಘದ ಸದಸ್ಯರಿಗೆ ಗೊಬ್ಬರ ಖರೀದಿ ಸಾಲ, ವ್ಯಾಪಾರ ಸಾಲ, ವಾಹನ ಖರೀದಿ ಸಾಲ, ಸ್ವಸಹಾಯ ಸಂಘಗಳ ಸಾಲ ವಿತರಿಸಲಾಗಿದೆ.
ಸಂಘದಿಂದ ಪಡಿತರ ವಿತರಣೆ, ಗೊಬ್ಬರ ವಿತರಣೆ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ. ಸದಸ್ಯರು ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡುವುದರ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಹಾಗೆಯೇ ಸಂಘದಲ್ಲಿ ಹೆಚ್ಚಿನ ವ್ಯವಹಾರ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.
ಸಭೆಯಲ್ಲಿ ಸಂಘದ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ವೇಣುಗೋಪಾಲ್ ಮಂಡಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಟಿ. ಪ್ರಸನ್ನ, ನಿರ್ದೇಶಕರಾದ ಓ.ಜಿ.ರವಿ, ಬಿ.ಎಂ. ರಮೇಶ್, ಕೆ.ಬಿ. ಗೋಪಾಲಗೌಡ, ಹೆಚ್.ಎಂ. ಅರ್ಜುನ್, ಹೆಚ್.ಎ. ಅಮೋಘ್, ಶ್ರೀಮತಿ ರಚನಾ ಅರುಣ್, ಶ್ರೀಮತಿ ಹೆಚ್.ಕೆ. ಸಾವಿತ್ರಿ ಉಮೇಶ್, ಶೇಖರ್ ಪೂಜಾರಿ, ಬಿ.ಎಂ. ರಮೇಶ್, ಎಸ್. ಸುಂದರ, ವೃತ್ತಿಪರ ನಿರ್ದೇಶಕರಾದ ಬಿ.ಎಲ್. ಉಪೇಂದ್ರ, ಹೆಚ್.ಎ. ದ್ಯಾವಣ್ಣಗೌಡ, ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರಾದ ಪ್ರಯಾಗ್, ಸಂಘದ ಮಾಜಿ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.