ಸಮಾಜಮುಖಿ ಕಾರ್ಯಗಳನ್ನು ಮಾಡುವ ವ್ಯಕ್ತಿಗಳಿಗೆ ಮತ್ತು ಸಂಘಸಂಸ್ಥೆಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ, ಅಂತರಾಷ್ಟ್ರೀಯ ಸಂಸ್ಥೆ ಜೇಸಿಐ ನಿರಂತರವಾಗಿ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳು ಪ್ರಶಂಸನೀಯ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಅವರು ಶನಿವಾರ ಜೇಸಿಐ ಮೂಡಿಗೆರೆ ಹಮ್ಮಿಕೊಂಡಿರುವ ಸಂಸ್ಕೃತಿ ಜೇಸಿ ಸಪ್ತಾಹ-2023, ಏಳುದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇವತ್ತು ಮಾತನಾಡುವವರ ಸಂಖ್ಯೆ ಸಾಕಷ್ಟು ಸಿಗುತ್ತದೆ. ಆದರೆ ಆ ಮಾತುಗಳು ಸಾಧನೆಯಾದಾಗ ಮಾತ್ರ ಅರ್ಥ ಬರುತ್ತದೆ. ಅನೇಕ ಜನರು, ಸಂಘ ಸಂಸ್ಥೆಗಳು ನಿಸ್ವಾರ್ಥವಾಗಿ ಸಮಾಜಸೇವೆಯಲ್ಲಿ ನಿರತವಾಗಿವೆ. ಸಮಾಜಮುಖಿ ಕಾರ್ಯಗಳನ್ನು ಮಾಡುವಾಗ ಟೀಕೆ ಟಿಪ್ಪಣಿಗಳು ಬರುವುದು ಸಹಜ. ಅವುಗಳನ್ನು ಎದುರಿಸಿ ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ ಎಂದರು.
ಮೂಡಿಗೆರೆ ಜೇಸಿ ಸಂಸ್ಥೆ ಐವತ್ತು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವುದು ನಿಜಕ್ಕೂ ಒಂದು ಉನ್ನತ ಸಾಧನೆ ಎಂದರು. ಕಳೆದ ಐವತ್ತು ವರ್ಷಗಳಿಂದ ಅತ್ಯಂತ ಸಕ್ರಿಯವಾಗಿ ಸಂಸ್ಥೆ ಮೂಡಿಗೆರೆ ಭಾಗದಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸುತ್ತಾ ಜನಪ್ರೀತಿ ಗಳಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜೇಸಿ ಭವನ ಕಟ್ಟಡ ಸಮಿತಿ ಅಧ್ಯಕ್ಷ ಎನ್.ಎಲ್. ಪುಣ್ಯಮೂರ್ತಿ ಮೂಡಿಗೆರೆ ಜೇಸಿ ಭವನವು ಇಂದು ಪಟ್ಟಣದ ಪ್ರಮುಖ ಸಾರ್ವಜನಿಕ ಸಭಾಂಗಣವಾಗಿದೆ. ಸಂಘಸಂಸ್ಥೆಗಳ ಕಾರ್ಯಕ್ರಮಗಳಿಗೆ ಕನಿಷ್ಠ ಬಾಡಿಗೆಯಲ್ಲಿ ಜೇಸಿ ಭವನವನ್ನು ನೀಡಲಾಗುತ್ತದೆ ಎಂದರು.
ಪೀಸ್ ಅಂಡ್ ಅವೇರ್ನೆಸ್ ಟ್ರಸ್ಟ್ ನ ಸಂಸ್ಥಾಪಕ ಆಲ್ತಾಪ್ ಬಿಳಗುಳ ಮಾತನಾಡಿ ರಕ್ತದಾನ ಶ್ರೇಷ್ಠವಾದ ದಾನವಾಗಿದೆ. ನಿರಂತರ ರಕ್ತದಾನ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ವೃದ್ಧಿಯಾಗುತ್ತದೆ. ರಕ್ತದಾನದಿಂದ ಮತ್ತೊಂದು ಜೀವಕ್ಕೆ ಪುನರ್ಜನ್ಮ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ಜೇಸಿಐ ಅಧ್ಯಕ್ಷೆ ಸವಿತಾ ರವಿ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷೆ ವಿದ್ಯಾರಾಜು, ಕಾರ್ಯದರ್ಶಿ ಪ್ರದೀಪ್ ಕುನ್ನಳ್ಳಿ, ಲೇಡಿ ಜೇಸಿ ಅಧ್ಯಕ್ಷೆ ಕವಿತಾ ಸಂತೋಷ್, ಕಾರ್ಯದರ್ಶಿ ರೇಖಾ ನಾಗರಾಜ್, ಜೇಸಿ ಸಪ್ತಾಹದ ನಿರ್ದೇಶಕಿ ದೀಪಿಕಾ ಪ್ರಸಾದ್, ವಿದ್ಯಾಶಶಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಕೆ.ಆರ್.ಎಸ್. ಆಸ್ಪತ್ರೆ ಹೃದಯ ತಜ್ಞ ಡಾ. ಶ್ರೀಧರ್ ಅವರು ಹೃದಯ ತಪಾಸಣೆ. ಮೂಡಿಗೆರೆ ಎಂ.ಜಿ.ಎA. ಆಸ್ಪತ್ರೆ ವತಯಿಂದ ಉಚಿತ ರಕ್ತದೊತ್ತಡ ಮತ್ತು ಮದುಮೇಹ ತಪಾಸಣೆ. ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಮತ್ತು ಹೋಲಿಕ್ರಾಸ್ ಆಸ್ಪತ್ರೆ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.