ಮೂಡಿಗೆರೆ ತಾಲ್ಲೂಕಿನ ಹಳಿಕೆ ಸರಕಾರಿ ಪ್ರಾಥಮಿಕ ಶಾಲೆ ಪ್ರಾರಂಭವಾಗಿ 75 ವಸಂತ ಪೂರೈಸಿದ ಹಿನ್ನಲೆಯಲ್ಲಿ ವಿವಿಧ ಇಲಾಖೆ, ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸೆಪ್ಟಂಬರ್ 7ರಂದು ಅಮೃತ ಮಹೋತ್ಸವ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಶಾಲೆಯಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಕೂಡ ಈ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದೇನೆ. ಈ ಶಾಲೆಯಲ್ಲಿ ವ್ಯಾಸಾಂಗ ಮಾಡಿದ ಬಹುತೇಕ ವಿದ್ಯಾರ್ಥಿಗಳು, ಎಂಜಿನಿಯರ್, ಕಾಫಿ ಬೋರ್ಡ್, ಪೊಲೀಸ್, ಯೋಧರು ಸೇರಿದಂತೆ ವಿವಿಧ ಉನ್ನತ ಹುದ್ದೆ ಪಡೆದಿದ್ದಾರೆ. ಸರಕಾರಿ ಶಾಲೆ ಮುಚ್ಚುತ್ತಿರುವ ಈ ಹಂತದಲ್ಲಿ ಇಂತಹ ಸಂಭ್ರಮ ಆಚರಣೆ ಮೂಲಕ ಶಾಲೆ ಉಳಿಸುವ ಪ್ರಯತ್ನ ಕೂಡ ಆಗಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆ ಕಿರುಹೊತ್ತಿಗೆ ಬಿಡುಗಡೆ, ನಿವೃತ್ತ ಶಿಕ್ಷಕರು, ಸಾಧನೆ ಮಾಡಿದ ಹಳೆ ವಿದ್ಯಾಥಿಗಳು ಹಾಗೂ ಹಿರಿಯ ನಾಗರೀಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಈಗಾಗಲೇ ಈ ಸಂಭ್ರಮದ ಕ್ಷಣವನ್ನು ಸವಿಯಲು ಪೂರ್ವ ತಯಾರಿ ನಡೆಸಲಾಗಿದೆ ಎಂದು ಹೇಳಿದರು.
ಸರಕಾರಿ ಶಾಲೆಗಳು ನಿಶಿಸಿ ಹೋಗಬಾರದು. ಅದಕ್ಕಾಗಿ 3 ಗ್ರಾ.ಪಂ. ವ್ಯಾಪ್ತಿಯಲ್ಲೊಂದು (ಕೆಪಿಎಸ್) ಕರ್ನಾಟಕ ಪಬ್ಲಿಕ್ ಸ್ಕೂಲ್ನ್ನು ತೆರವುಗೊಳಿಸಬೇಕು. ಅದಕ್ಕಾಗಿ ಬಸ್ಸು ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕೆಂದು ಶಿಕ್ಷಣ ಸಚವರೊಂರಿಗೆ ಚರ್ಚಿಸಿದ್ದೇನೆ. ಅಲ್ಲದೇ ಎಸ್ಡಿಎಂಸಿ ಒಳಗೆ ಕೇವಲ ಪೋಷಕರು ಮಾತ್ರವಲ್ಲ. ದಾನಿಗಳು, ಶಿಕ್ಷಣ ಪ್ರೇಮಿಗಳು ಸೇರ್ಪಡೆಗೊಳ್ಳುವಂತೆ ಸರಕಾರದ ಗೈಡ್ಲೈನ್ನಲ್ಲಿ ಉಲ್ಲೇಖಿಸಲು ಮನವಿ ಮಾಡಿಕೊಂಡಿದ್ದೇನೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ನಯನಾ ಮೋಟಮ್ಮ ವಹಿಸಲಿದ್ದು, ದ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಉದ್ಘಾಟನೆ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಜೈರಾಮ್ ರಮೇಶ್, ಎಂಎಲ್ಸಿ ಎಸ್.ಎಲ್.ಭೋಜೇಗೌಡ, ಬೆಟ್ಟಗೆರೆ ಗ್ರಾ.ಪಂ. ಅಧ್ಯಕ್ಷ ಕೆ.ಬಿ.ಗೋಪಾಲಗೌಡ, ಉಪಾಧ್ಯಕ್ಷೆ ಸುಶೀಲಾ ಲಕ್ಷ್ಮಣ್ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಹಳಿಕೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಿವಣ್ಣಗೌಡ, ಪ್ರಾಂಶುಪಾಲ ದಿಬ್ಬೇಗೌಡ, ಗ್ರಾಮದ ಮುಖಂಡರಾದ ಬಿ.ಆರ್.ಯತೀಶ್, ಬಿಇ.ಕೆ.ದಿನೇಶ್, ಶಂಕರ್ ಬೆಟ್ಟಗೆರೆ, ಸುಬ್ಬಯ್ಯ, ಬಿ.ಎ.ಯತೀಶ್, ಸರ್ವೇಶ್, ನೂತನ್, ಸುಪ್ರಿತ್, ಅಮೋಘ, ಸಂತೋಷ್, ಶಿಕ್ಷಕರಾದ ಮಂಜನಾಯಕ್, ರೇಣುಕಮ್ಮ, ಸಂದ್ಯಾ ಉಪಸ್ಥಿತರಿದ್ದರು.