ಮನೆಯಲ್ಲಿ ಕೋಳಿ ಸಾಕುವವರು ಬಹಳ ಎಚ್ಚರವಾಗಿರಬೇಕು. ಕೋಳಿಮೊಟ್ಟೆಯನ್ನರಸಿ ಬರುವ ನಾಗರಹಾವುಗಳಿಂದ ಅಪಾಯ ಎದುರಾಗುವ ಸಾಧ್ಯತೆಯಿರುತ್ತದೆ.
ಇಲ್ಲಿಯೂ ಹಾಗೆಯೇ ಆಗಿದೆ. ಮನೆಯ ಕೊಟ್ಟಿಗೆಯಲ್ಲಿ ಇಟ್ಟಿದ್ದ ಕೋಳಿ ಬುಟ್ಟಿಗೆ ಪದೇ ಪದೇ ನಾಗರಹಾವೊಂದು ಬಂದು ಮನೆಯವರನ್ನು ಭಯ ಪಡುವಂತೆ ಮಾಡುತ್ತಿತ್ತು. ಇದರಿಂದ ಆತಂಕಿತರಾಗಿದ್ದ ಮನೆಯವರು ಕೊನೆಗೆ ಆ ಹಾವನ್ನು ಹಿಡಿಸಿ ಕಾಡಿಗೆ ಬಿಟ್ಟಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಬಾಳೆಹಳ್ಳಿ ಗ್ರಾಮದ ಮಂಜು ಎಂಬುವವರ ಮನೆಯ ಕೊಟ್ಟಿಗೆಗೆ ಬಂದಿದ್ದ ಸುಮಾರು ಐದು ಅಡಿ ಉದ್ದದ ದೊಡ್ಡ ಗಾತ್ರದ ನಾಗರವೊಂದನ್ನು ಸ್ಥಳೀಯ ಉರಗತಜ್ಞ ಬಣಕಲ್ ಆರೀಫ್ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಮಂಜು ಅವರ ಮನೆಯಲ್ಲಿ ನಾಟಿ ಕೋಳಿಗಳನ್ನು ಸಾಕಿದ್ದರು. ಕೋಳಿ ಮರಿ ಮಾಡಿಸಲೆಂದು ಬುಟ್ಟಿಯಲ್ಲಿ ಮೊಟ್ಟೆ ಇಟ್ಟು ಕೋಳಿಯನ್ನು ಕಾವು ಕೂರಿಸಿದ್ದರು. ಈ ಮೊಟ್ಟೆಗಳನ್ನು ಅರಸಿ ಸಮೀಪದ ತೋಟದಿಂದ ನಾಗರಹಾವೊಂದು ಬರುತ್ತಿತ್ತು.
ನಿನ್ನೆ ಸಂಜೆ ಹೀಗೆ ಹಾವು ಬಂದು ಬುಟ್ಟಿಯಲ್ಲಿ ಕುಳಿತ್ತಿದ್ದಾಗ ಆರೀಫ್ ಅವರನ್ನು ಕರೆಸಿ ಅದನ್ನು ಸುರಕ್ಷಿತವಾಗಿ ಹಿಡಿಸಿ ಅರಣ್ಯ ಪ್ರದೇಶದಕ್ಕೆ ಬಿಡಲಾಗಿದೆ.
ಸುರಕ್ಷಿತ ಕ್ರಮ ಕೈಗೊಳ್ಳಲು ಸಲಹೆ : ಇತ್ತೀಚೆಗೆ ವಿಷಕಾರಿ ಹಾವು ಹಿಡಿಯುವಾಗ ಅಪಾಯಗಳು ಸಂಭವಿಸುತ್ತಿದೆ. ಕಳೆದ ವರ್ಷ ಕಳಸದಲ್ಲಿ ಉರಗತಜ್ಞ ಪ್ರಫುಲ್ಲ ಭಟ್ ಕಾಳಿಂಗ ಸರ್ಪ ಕಚ್ಚಿ ಸಾವನ್ನಪ್ಪಿದ್ದರು. ಇತ್ತೀಚೆಗೆ ಚಿಕ್ಕಮಗಳೂರು ಸ್ನೇಕ್ ನರೇಶ್ ಎಂಬುವವರು ಹಾವು ಕಚ್ಚಿ ಸಾವನ್ನಪ್ಪಿದ್ದರು.
ಹಾಗಾಗಿ ಹಾವುಗಳನ್ನು ಹಿಡಿಯುವ ಹವ್ಯಾಸಿ ಉರಗತಜ್ಞರಿಗೆ ಅರಣ್ಯ ಇಲಾಖೆ ಸೂಕ್ತ ತರಬೇತಿ ಮತ್ತು ಸುರಕ್ಷತಾ ಪರಿಕರಗಳನ್ನು ನೀಡಬೇಕು ಮತ್ತು ಹಾವು ಹಿಡಿಯುವವರು ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಹಾವು ಹಿಡಿಯಲು ಮುಂದಾಗಬೇಕಾಗಿದೆ.