ಸಕಲೇಶಪುರ ಆಲೂರು ಭಾಗದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಅರವಳಿಕೆ ತಜ್ಞರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು ಅವರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಇತ್ತೀಚೆಗೆ ಸಕಲೇಶಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಪರಸ್ಪರ ಕಾದಾಟ ನಡೆಸಿದ ಪರಿಣಾಮ ಭೀಮ ಎನ್ನು ಕಾಡಾನೆ ತೀವ್ರವಾಗಿ ಗಾಯಗೊಂಡಿತ್ತು. ತೀವ್ರ ಗಾಯಗೊಂಡು ನರಳುತ್ತಾ ತಿರುಗುತ್ತಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ನೀಡಲು ಮುಂದಾಗಿತ್ತು. ಅದರ ಅಂಗವಾಗಿ ಇಂದು ಆನೆಯನ್ನು ಅರವಳಿಕೆ ಮದ್ದು ನೀಡಿ ಕೆಳಗೆ ಬೀಳಿಸುವ ಕಾರ್ಯಾಚರಣೆ ನಡೆಸಲಾಗುತಿತ್ತು.
ಆಲೂರು ಸಮೀಪದ ಹಳ್ಳಿಯೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಲು ಬಂದಿದ್ದ ಅರಣ್ಯ ಇಲಾಖೆ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ.
ನಿಗದಿಪಡಿಸಿದ ಜಾಗದಲ್ಲಿ ನಿಂತು ಆನೆಗೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿದ ತಕ್ಷಣ ಗಾಬರಿಗೊಂಡ ಕಾಡಾನೆ ವೆಂಕಟೇಶ್ ಮೇಲೆ ಎರಗಿದೆ. ಅವರನ್ನು ಕೆಳಗಿ ಬೀಳಿಸಿ ತುಳಿದಿದೆ. ಆನೆದಾಳಿಯಲ್ಲಿ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ತಲೆ ಭಾಗಕ್ಕೆ ಪೆಟ್ಟಾಗಿದ್ದು. ಅವರನ್ನು ತಕ್ಷಣ ರಕ್ಷಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಸಾಗಿಸಲಾಗಿದೆ.