ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಹ್ಯೂಮನಿಟಿ ಟ್ರಸ್ಟ್ ಸಮಾಜ ಸೇವೆಗಾಗಿ ನೀಡುವ ಹ್ಯೂಮನಿಟಿ ಟ್ರಸ್ಟ್ ಅಭಿಮಾನಿ ಪ್ರಶಸ್ತಿಯನ್ನು ಈ ಬಾರಿ ಒಟ್ಟು ಹತ್ತು ಜನರಿಗೆ ನೀಡಿ ಗೌರವಿಸಿದೆ.
ಆಗಸ್ಟ್ 27 ರಂದು ಮೂಡಬಿದ್ರಿಯ ಪಡುಮೂರ್ನಾಡು ಪಾಂಚಜನ್ಯ ಸಭಾಂಗದಲ್ಲಿ ಹಮ್ಮಿಕೊಂಡಿದ್ದ ಉಚಿತ ವಸತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಟ್ಟು 10 ಮಂದಿ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದ ಅಬ್ದುಲ್ ಶಾಜಿದ್ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾಗಿದ್ದಾರೆ. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ಶಾಜಿದ್ ಅವರು ಹ್ಯೂಮನಿಟಿ ಟ್ರಸ್ಟ್ ಸಮಾಜ ಸೇವಾ ಕಾರ್ಯಗಳಿಗೂ ಹೆಚ್ಚಿನ ದೇಣಿಗೆ ನೀಡುತ್ತಾ ಬಂದಿದ್ದಾರೆ.
ಹ್ಯೂಮನಿಟಿ ಟ್ರಸ್ಟ್ ಬಡ ನಿರ್ಗತಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅನೇಕ ಸಮಾಜ ಸೇವಾ ಕಾರ್ಯಗಳನ್ನು ನೆರವೇರಿಸುತ್ತಾ ಬಂದಿದೆ.
ಪ್ರಶಸ್ತಿ ವಿಜೇತರಲ್ಲಿ ಬಣಕಲ್ ನ ಅಬ್ದುಲ್ ಶಾಜೀದ್, ಮೂಡಬಿದ್ರೆಯ ಪ್ರಕಾಶ್ ಜಿ. ಶೆಟ್ಟಿಗಾರ್, ಶಿವಮೊಗ್ಗ ರಾಜು, ಇಸ್ರೇಲ್ ನ ಪ್ಲಾವಿ ಮತಾಯಿಸ್, ಕುವೈಟ್ ನ ಜಾನ್ಸರ್ ಡಿ. ಅಲ್ಮೇಡಾ, ಸಾಲೆತೂರಿನ ಮೌರಿಸ್ ಡಿಸೋಜ, ಕಟೀಲ್ ನ ಮ್ಯಾಕ್ಸಿಂ ಸಿಕ್ವೇರಾ, ಮೂಡಬಿದ್ರೆಯ ಸುನಿಲ್ ಮೆಂಡೋನ್ಸ, ದುಬೈ ನ ಜಾಯ್ ಪೆರೆರಾ, ಕಿನ್ನಿಗೋಳಿಯ ಲಾಯ್ಡ್ ಡಿಸೋಜಾ ಇದ್ದಾರೆ.
ಇವರೆಲ್ಲರೂ ಹ್ಯೂಮನಿಟಿ ಟ್ರಸ್ಟ್ ಸೇವಾ ಕಾರ್ಯಗಳಲ್ಲಿ ಕೈಜೋಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಜಯಟೈಮ್ಸ್ ಮುಖ್ಯಸ್ಥೆ ವಿಜಯಲಕ್ಷ್ಮೀ ಶಿಬರೂರು, ಡೈಜಿ ವಲ್ರ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಹ್ಯೂಮನಿಟಿ ಟ್ರಸ್ಟ್ ನ ಮುಖ್ಯಸ್ಥರಾದ ರೋಷನ್ ಬೆಳ್ಮಣ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.