ಮೂಡಿಗೆರೆ ತಾಲ್ಲೂಕು ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಜಿ.ಕೆ. ದಿವಾಕರ್ ಪುನರಾಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ 11 ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ.
ಅಧ್ಯಕ್ಷರಾಗಿ ಜಿ.ಕೆ. ದಿವಾಕರ್ ಗೌಡಹಳ್ಳಿ ಮತ್ತು ಉಪಾಧ್ಯಕ್ಷರಾಗಿ ಹೆಚ್.ಜಿ. ವೆಂಕಟೇಶ್ ಹೊನ್ನೆಕೂಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿ.ಕೆ. ದಿವಾಕರ್ ಅವರು 8ನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಒಟ್ಟು 9ನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, 40 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದೀಗ ಮತ್ತೊಂದು ಅವಧಿಗೆ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಜಿ.ಕೆ. ದಿವಾಕರ್ ಅವರು ಗೌಡಹಳ್ಳಿ ಸಹಕಾರ ಸಂಘವು ಜಿಲ್ಲೆಯ ಹಿರಿಯ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರಸ್ತುತ ಸಹಕಾರ ಸಂಘವು ರೂ. 1,17,30,861 ಷೇರುಬಂಡವಾಳ ಹೊಂದಿದೆ. ಸಹಕಾರ ಸಂಘದಿಂದ ರೈತರಿಗೆ ಸಾಲ ಸೌಲಭ್ಯ, ಸ್ವಂತ ಬಂಡವಾಳದಿಂದ ವ್ಯಾಪಾರ ಸಾಲ, ವಾಹನ ಸಾಲ ಸೇರಿದಂತೆ ಸದಸ್ಯರಿಗೆ ವಿವಿಧ ರೀತಿಯ ಸಾಲವನ್ನು ವಿತರಿಸಲಾಗಿದೆ. ರಸಗೊಬ್ಬರ ವ್ಯಾಪಾರ, ಪಡಿತರ ವಿತರಣೆ, ಬೆಳೆವಿಮೆ, ಯಶಸ್ವಿನಿ ಯೋಜನೆ, ಪಿಗ್ಮಿ, ಆರ್.ಡಿ, ಬ್ಯಾಂಕಿಂಗ್ ವ್ಯವಹಾರದ ಮೂಲಕ ಸದಸ್ಯರಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಊರುಬಗೆಯಲ್ಲಿ ನೂತನವಾಗಿ ದಾಸ್ತಾನು ಗೋದಾಮು ನಿರ್ಮಿಸಿದ್ದು, ಆ ಭಾಗದ ರೈತರಿಗೆ ಗೊಬ್ಬರ ಪಡಿತರ ವಿತರಣೆ ಅಲ್ಲಿಂದಲೇ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎಲ್. ಚಂದ್ರೇಗೌಡ, ಬಿ.ಪಿ. ಕೃಷ್ಣೇಗೌಡ, ಎಂ.ಎಸ್. ಸಂತೋಷ್, ಬಿ.ಬಿ. ವಿನೇಶ್, ಎಂ.ಪಿ. ಅರುಣ್, ಹೆಚ್.ಕೆ. ಲಿಂಗಪ್ಪ, ಜಿ.ಟಿ. ರಮೇಶ್, ಶ್ರೀಮತಿ ಜಯಮ್ಮ, ಶ್ರೀಮತಿ ಸುಮಾ ರವಿಕುಮಾರ್, ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರಾದ ನಿತಿನ್ ಪಟೇಲ್, ಪ್ರಯೋಗ್, ಸಂಘದ ಸಿ.ಇ.ಓ. ಎಸ್.ಆರ್. ರವೀಂದ್ರ ಮತ್ತು ಸಿಬ್ಬಂದಿ ವರ್ಗದವರು, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಹಕಾರ ಸಂಘಗಳ ದ್ವಿತೀಯ ದರ್ಜೆ ಸಹಾಯಕ ನಾಗರಾಜು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.