ಮೂಡಿಗೆರೆ, ಚಿಕ್ಕಮಗಳೂರು, ಬೇಲೂರು ಗಡಿ ಭಾಗದಲ್ಲಿದ್ದ ಸುಮಾರು 50 ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ಬಸ್ ನಿಲ್ದಾಣ ತೆರವುಗೊಳಿಸಿದ್ದ ಹಿನ್ನಲೆಯಲ್ಲಿ ಸುತ್ತುಮುತ್ತಲಿನ ಗ್ರಾಮಸ್ಥರು ಬೀದಿಯಲ್ಲಿ ನಿಲ್ಲುವಂತ ಪರಿಸ್ಥಿತಿಗೆ ಈಗ ತೆರೆ ಬಿದ್ದಿದೆ.
ಮೂಡಿಗೆರೆ ತಾಲ್ಲೂಕಿನ ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳುಗೂಡು ಎಂಬಲ್ಲಿ ಇದ್ದ ಬಸ್ ತಂಗುದಾಣ ಮೂರು ತಾಲ್ಲೂಕುಗಳ ಗಡಿಭಾಗದಲ್ಲಿದ್ದು ನಿತ್ಯ ನೂರಾರು ಜನರಿಗೆ ಅನುಕೂಲ ಆಗುತ್ತಿತ್ತು. ಆದರೆ ಕಳೆದ ವರ್ಷ ಈ ಬಸ್ ತಂಗುದಾಣದ ಜಾಗದ ವಿಚಾರದಲ್ಲಿ ವಿವಾದ ಉಂಟಾಗಿ ಜನರಿಗೆ ತುಂಬಾ ಅನಾನುಕೂಲವಾಗಿತ್ತು. ಪ್ರತಿಭಟನೆಗಳಿಗೂ ಅವಕಾಶ ಆಗಿತ್ತು.
ಆ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಮಧ್ಯಪ್ರವೇಶಿಸಿ ಬಸ್ ತಂಗುದಾಣ ಮರುನಿರ್ಮಾಣಕ್ಕೆ ತಮ್ಮ ಅನುದಾನ ನೀಡುವ ಭರವಸೆ ನೀಡಿದ್ದರು. ಅದರಂತೆ ಹಳೆಯ ಶಿಥಿಲಗೊಂಡಿದ್ದ ಬಸ್ ತಂಗುದಾಣದ ಸ್ಥಳದಲ್ಲಿ ಈಗ ಸುಂದರವಾದ ಬಸ್ ತಂಗುದಾಣ ನಿರ್ಮಿಸಲಾಗಿದೆ.
ಇತ್ತೀಚೆಗೆ ನೂತನ ಬಸ್ ತಂಗುದಾಣವನ್ನು ಎಂ.ಕೆ. ಪ್ರಾಣೇಶ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ; ತಂಗುದಾಣ ಶಿಥಿಲಗೊಂಡಿದ್ದ ಕಾರಣ ಹೊಸ ಕಟ್ಟಡ ನಿರ್ಮಿಸಲು ತಾನು 5 ಲಕ್ಷ ಅನುದಾನ ಮೀಸಲಿರಿಸಿದ್ದೆ. ಈ ಹಿನ್ನಲೆಯಲ್ಲಿ ಹಳೆ ಕಟ್ಟಡ ನೆಲಸಮಗೊಳಿಸಿದ ಬಳಿಕ ವ್ಯಕ್ತಿಯೋರ್ವರು ಕಾಂಪೌಂಡ್ ನಿರ್ಮಿಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಇದರಿಂದ ಅನೇಕ ಪ್ರತಿಭಟನೆ ಕೂಡ ನಡೆದಿತ್ತು. ಹಾಗಾಗಿ ಜಾಗ ಸರ್ವೆ ನಡೆಸುವ ಮೂಲಕ ಎಲ್ಲಾ ಗೊಂದಲ ನಿವಾರಸಿಕೊಂಡು ಇದೀಗ ನೂತನ ತಂಗುದಾಣ ಕಾಮಗಾರಿ ಪೂರ್ಣಗೊಳಿಸಿ, 3 ತಾಲೂಕಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಮಾಜಿ ಸಚಿವೆ ಬಿ.ಬಿ.ನಿಂಗಯ್ಯ ಮಾತನಾಡಿ, ಈ ತಂಗುದಾಣ ಮೂಡಿಗೆರೆ ತಾಲೂಕಿನ ಕೋಳುಗೂಡು, ಮಾಲಳ್ಳಿ, ನಂದಿಪುರಗುಡ್ಡೆ, ಇಂದ್ರವಳ್ಳಿ ಗ್ರಾಮ, ಚಿಕ್ಕಮಗಳೂರು ತಾಲೂಕಿನ ಬಸ್ಕಲ್, ನರಡಿ, ಮಾಗೆಹಳ್ಳಿ, ಬೇಲೂರು ತಾಲೂಕಿನ ಹಳೇಗೆಂಡೇಹಳ್ಳಿ, ವಾಟಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಪ್ರಯಾಣಿಕರು ಹಾಗೂ ಶಾಲೆ ಮಕ್ಕಳಿಗೆ ಆಶ್ರಯವಾಗಿದೆ. ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಂಗುದಾಣ ನಿರ್ಮಾಣಕ್ಕಾಗಿ ಜಾಗ ದಾನವಾಗಿ ನೀಡಿದ ಜಿ.ಎನ್.ಮಂಜುನಾಥ್ ಕುಟುಂಬಕ್ಕೆ ಗೌರವ ಸಮರ್ಪಿಸಿ ಅಭಿನಂದಿಸಲಾಯಿತು.
ನಂದೀಪುರ ಗ್ರಾ.ಪಂ. ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್, ಉಪಾಧ್ಯಕ್ಷೆ ನಳಿನಿ ರಘುನಾಥ್, ಸದಸ್ಯರಾದ ಎಂ.ಎಸ್.ರಮೇಶ್, ರಘು ಭಾರತಿ, ಪಿ.ಎಸ್.ರಘು, ಲೀಲಾ, ಸುಂದ್ರೇಶ್, ಪಿಡಿಓ ಡಿ.ಎಸ್.ಪ್ರತಿಮಾ, ರಘುನಾಥ್, ಶಶಿಕಲಾ ಮತ್ತಿತರರಿದ್ದರು.