ಎರಡು ದಿನದ ಹಿಂದೆ ಕಾಣೆಯಾಗಿದ್ದ ಕಾಫಿ ಎಸ್ಟೇಟ್ ಮ್ಯಾನೇಜರ್ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಖಾನ್ ಗುಡ್ಡ ಎಸ್ಟೇಟ್ ನ ಮ್ಯಾನೇಜರ್ ಕಾಶಿ ಬೋಪಯ್ಯ ಎಂಬುವವರ ಶವ ಕೆರೆಯೊಂದರಲ್ಲಿ ಪತ್ತೆಯಾಗಿದೆ.
ಮೂಲತಃ ಕೊಡಗು ಜಿಲ್ಲೆಯ ಶೆಟ್ಟಿಗೇರಿ ಗ್ರಾಮದ ಬೋಪಯ್ಯ ಕಳೆದ ಹಲವು ವರ್ಷಗಳಿಂದ ಬಾಳೆಹೊನ್ನೂರು ಸಮೀಪದ ಖಾನ್ ಗುಡ್ಡ ಎಸ್ಟೇಟ್ ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಎರಡು ದಿನದ ಹಿಂದೆ ಬೋಪಯ್ಯ ಇದ್ದಕ್ಕಿದಂತೆ ಕಾಣೆಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ನಿನ್ನೆ ಬೋಪಯ್ಯ ಅವರ ಮೃತದೇಹ ಎಸ್ಟೇಟ್ ನ ಕೆರೆಯೊಂದರಲ್ಲಿ ಪತ್ತೆಯಾಗಿದೆ. ಕೆರೆಯ ಪಕ್ಕದಲ್ಲಿ ಬೋಪಯ್ಯ ಅವರ ಜೀಪ್, ಚಪ್ಪಲಿ, ಪರ್ಸ್ ಪತ್ತೆಯಾಗಿದೆ.
ಬೋಪಯ್ಯ ಅವರು ಶವವಾಗಿ ಪತ್ತೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಇದು ಕೊಲೆ ಇರಬಹುದು ಎಂದು ಶಂಕಿಸಲಾಗಿದೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.