ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಬುಧವಾರ ಪ್ರಗತಿ ಮತ್ತು ಕುಂದು ಕೊರತೆ ಪರಿಶೀಲನೆ ಸಭೆ ನಡೆದಿದ್ದು, ಸಭೆಯಲ್ಲಿ ಕಾಡಾನೆ ಹಾವಳಿ, ಸ್ಮಶಾನ ಭೂಮಿ, ನಿವೇಶನ, ಡೀಮ್ಡ್ ಫಾರೆಸ್ಟ್, ಕುಡಿಯುವ ನೀರು, ವಿದ್ಯುತ್ ಕಳಸ ಇನಾಂ ಭೂಮಿ, ನಿರಾಶ್ರಿತರಿಗೆ ಪರಿಹಾರ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಆರಂಭದಲ್ಲಿ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ಶಾಸಕಿ ನಯನಾ ಮೋಟಮ್ಮ ಅವರು ಮಾತನಾಡಿ
- ಕಾಡಾನೆ ಹಾವಳಿಯಿಂದ ಬೆಳೆ ನಾಶ, ಪ್ರಾಣ ಹಾನಿ ಸಂಭವಿಸಿದೆ. ಮುಂದೆ ಯಾವುದೇ ಪ್ರಾಣ ಹಾನಿ ಹಾಗೂ ಬೆಳೆನಾಶವಾಗದಂತೆ ಕೂಡಲೇ ಸೋಲಾರ್ ಫೆನ್ಸಿಂಗ್ ಹಾಗೂ ರೈಲ್ವೆ ಬ್ಯಾರಿಕೇಟ್ ನಿರ್ಮಾಣವಾಗಬೇಕು.
- ಹೇಮಾವತಿ ನದಿಯಿಂದ 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಭದ್ರ ನದಿ ಕೂಡ ಇಲ್ಲಿಯೇ ಹುಟ್ಟುತ್ತದೆ. ಆ ನೀರು ಕರಾವಳಿಗೆ ಹರಿದು ಹೋಗುತ್ತಿದೆ. ಈ ಎರಡೂ ನದಿಯಿಂದ ಮೂಡಿಗೆರೆ ಮತ್ತು ಕಳಸ ತಾಲೂಕಿಗೆ ಕುಡಿಯುವ ನೀರಿನ ಪೂರೈಕೆಯಾಗಬೇಕು.
- ತುರ್ತಾಗಿ ಮಲೆಮನೆ ಮದುಗುಂಡಿ ನಿರಾಶ್ರಿತರ 11 ಕುಟುಂಬಕ್ಕೆ ಪರಿಹಾರ ಒದಗಿಸಬೇಕು.
- ಕಳಸ ಇನಾಂ ಭೂಮಿ ಬದಲಾಗಿ ಮುಳ್ಳಯ್ಯನಗಿರಿಯ ಭೂಮಿ ನೀಡಲು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇನಾಂ ಭೂಮಿ ಉಳಿಸಲು ಸರಕಾರದಿಂದ ಕೋರ್ಟ್ಗೆ ಅಫಡವಿಟ್ ಸಲ್ಲಿಸಬೇಕು. ಇಲ್ಲವಾದರೆ 2 ಸಾವಿರ ಕುಟುಂಬ ಬೀದಿಗೆ ಬೀಳುತ್ತದೆ. ಈ ಎಲ್ಲಾ ಸಮಸ್ಯೆಗಳು ಸರಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ
- ಸ್ಮಶಾನ ಭೂಮಿ ಸಮಸ್ಯೆ ಹಿಂದಿನಿಂದಲೂ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಬಹುತೇಕ ಜಾಗಗಳು ಒತ್ತುವರಿಯಾಗಿದೆ.
- ಇದು ಜಿಲ್ಲಾಧಿಕಾರಿ ಮಟ್ಟದಲ್ಲಿ ಸೆ.30ರೊಳಗೆ ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಸೂಚಿಸಿದರು.
- ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಸಭೆಯಲ್ಲಿ ತಾಲ್ಲೂಕಿನ ಅನೇಕ ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಹಾಲಿ ಸರ್ಕಾರ ಆದ್ಯತೆಯ ಮೇರೆಗೆ ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.
- ಬಳಿಕ ಜಿಲ್ಲಾ ಉಸ್ತುವಾರಿ ಸಚಿವೆ ಕೆ.ಜೆ.ಜಾರ್ಜ್ ಮಾತನಾಡಿ, ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ತೀರ್ಮಾನ ಕೈಗೊಂಡರೆ ಬಹುತೇಕ ಸಮಸ್ಯೆ ಸ್ಥಳೀಯವಾಗಿಯೇ ಇತ್ಯರ್ಥವಾಗುತ್ತದೆ. ಅದಕ್ಕೆ ಸಚಿವರು, ಶಾಸಕರ ಬಳಿ ತೆರಳುವಂತಹ ಪ್ರಸಂಗ ಬರುವುದಿಲ್ಲ. ಅನುದಾನ ಹುಡುಕಿಕೊಂಡು ಬರುವುದಿಲ್ಲ. ಅದನ್ನು ಅಧಿಕಾರಿಗಳೇ ಬೇಕೆಂದು ಸರಕಾರಕ್ಕೆ ವರದಿ ಸಲ್ಲಿಸಬೇಕು. ನಿವೇಶನ ಮತ್ತು ಸ್ಮಶಾನ ಜಾಗ ಒತ್ತುವರಿಯಾಗಿದ್ದರೆ ಕೂಡಲೇ ಬಿಡಿಸಬೇಕು. ಡೀಮ್ಡ್ ಅರಣ್ಯ, ಕಂದಾಯ ಜಾಗದಲ್ಲಿ ಕಾನೂನು ತೊಡಕುಂಟಾದರೆ ಸರಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಕಾಡಾನೆ ಸಮಸ್ಯೆಗೆ ಅರಣ್ಯ ಸಚಿವರೊಂದಿಗೆ ಅರಣ್ಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸಿ ಶಾಶ್ವತ ಪರಿಹಾರ ಒದಗಿಸಲಾಗುವುದು. ಜನ್ನಾಪುರ, ಹಾಂದಿ, ಮಲ್ಲಂದೂರು ವ್ಯಾಪ್ತಿಯಲ್ಲಿ ವಿದ್ಯುತ್ ಉಪ ಕೇಂದ್ರ ಶೀಘ್ರ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಮದುಗುಂಡಿ, ಮಲೆಮನೆ 11 ನಿರಾಶ್ರಿತ ಕುಟುಂಬಕ್ಕೆ ಭೂಮಿ ನೀಡಲು ಕಂದಾಯ ಮತ್ತು ಅರಣ್ಯ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆಂದು ಭರವಸೆ ನೀಡಿದರು.
- ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ, ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.