ಮೊನ್ನೆ ಬುಧವಾರ ಹಾಸನದಲ್ಲಿ ನಡೆದಿದ್ದ ಜೆ.ಡಿ.ಎಸ್. ಮುಖಂಡ, ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣದ ಅರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಳೆನರಸೀಪುರ ಶಾಸಕ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೃಷ್ಣಗೌಡ ಅವರನ್ನು ಬುಧವಾರ ದುಷ್ಕರ್ಮಿಗಳ ತಂಡ ಹಾಡಹಗಲೇ ಕೊಲೆ ಮಾಡಿತ್ತು.
ಹಾಸನ ಇಂಡಸ್ಟ್ರೀಯಲ್ ಏರಿಯಾದಲ್ಲಿ ಗ್ರಾನೈಟ್ ಪ್ಯಾಕ್ಟರಿ ಹೊಂದಿದ್ದ ಕೃಷ್ಣೇಗೌಡ ತಮ್ಮ ಪ್ಯಾಕ್ಟರಿಯ ಮುಂಭಾಗದಲ್ಲಿಯೇ ಕೊಲೆಗೀಡಾಗಿದ್ದರು.
ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಕೃಷ್ಣೇಗೌಡ ತಮ್ಮ ಪ್ಯಾಕ್ಟರಿ ಬಳಿಯಲ್ಲಿ ಕಾರಿನಿಂದ ಇಳಿಯುವಾಗಲೇ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಮೂರೇ ದಿನದಲ್ಲಿ ಆರೋಪಿಗಳು ಅಂದರ್ : ಹಾಸನ ನಗರವನ್ನು ಬೆಚ್ಚಿ ಬೀಳಿಸಿದ್ದ ಈ ಪ್ರಕರಣವನ್ನು ಪೊಲೀಸರು ಸವಾಲಾಗಿ ಸ್ವೀಕರಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸುರೇಶ್, ಕೃಷ್ಣಕುಮಾರ್, ಸಂಜಯ್, ಸುಧಾ ರಾಣಿ, ಅಶ್ವಿನಿ ಹಾಗೂ ಚೈತ್ರಾ ಇವರುಗಳನ್ನು ಪೊಲೀಸರು ಬಂದಿಸಿದ್ದಾರೆ. ಪ್ರಮುಖ ಆರೋಪಿ ಯೋಗಾನಂದ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಕೊಲೆಗೆ ಕಾರಣನಾಗಿರುವ ಪ್ರಮುಖ ಆರೋಪಿ ಯೋಗಾನಂದ ಮತ್ತು ಸುರೇಶ್ ಹತ್ಯೆಯಾದ ಕೃಷ್ಣೇಗೌಡ ಅವರಿಂದ ಸ್ಥಳೀಯ ಸುದ್ದಿ ಚಾನಲ್ ಮಾಡುವ ಮತ್ತು ಸಿನಿಮಾ ನಿರ್ಮಾಣ ಮಾಡುವ ಪ್ಲಾನ್ ಮುಂದಿಟ್ಟು ಹಣ ಹೂಡಿಕೆ ಮಾಡಿಸಿದ್ದರು. ಬಳಿಕ ವ್ಯವಹಾರದಲ್ಲಿ ಯಾವುದೇ ಲಾಭ ಬಾರದೇ ಇದ್ದಾಗ ಕೃಷ್ಣೇಗೌಡ ತಾನು ನೀಡಿರುವ ಹಣ ವಾಪಾಸ್ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಕೃಷ್ಣೇಗೌಡ, ಸುರೇಶ್ ಮತ್ತು ಯೋಗಾನಂದ ನಡುವೆ ಕಲಹ ಏರ್ಪಟ್ಟಿತ್ತು.
ಕೃಷ್ಣೇಗೌಡ ನೀಡಿದ ಹಣ ವಾಪಾಸ್ಸು ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಎಲ್ಲರೂ ಸೇರಿ ಕೃಷ್ಣೇಗೌಡ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಕೊಲೆಗೆ ಸುಫಾರಿ ನೀಡಿದ್ದರು. ಬೆಂಗಳೂರು ಮೂಲಕ ಸುಫಾರಿ ಕಿಲ್ಲರ್ಸ್ ಕೃಷ್ಣೇಗೌಡರ ಕೊಲೆ ಮಾಡಿದ್ದರು ಎನ್ನಲಾಗಿದೆ.
ಪ್ರಮುಖ ಆರೋಪಿ ಯೋಗಾನಂದ ಸ್ಥಳೀಯ ಒಂದು ಚಾನಲ್ ಸಹ ನಡೆಸುತ್ತಿದ್ದ ಮತ್ತು ಅದರಲ್ಲಿ ಸುರೇಶ ಪಾಲುದಾರನಾಗಿದ್ದ ಎನ್ನಲಾಗಿದೆ. ಇವರಲ್ಲದೇ ಯೋಗಾನಂದ್ ಪತ್ನಿ ಸುಧಾರಾಣಿ, ಗೆಳತಿ ಅಶ್ವಿನಿ, ಮಾವ ಕೃಷ್ಣಕುಮಾರ್ ಹಾಗೂ ಸಂಬಂಧಿ ಸಂಜಯ್ ಮತ್ತು ಸಂಜಯ್ ಪತ್ನಿ ಚೈತ್ರಾ ಇವರುಗಳನ್ನು ಬಂಧಿಸಲಾಗಿದೆ.