ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಓರ್ವ ಯುವಕ ಮತ್ತೋರ್ವ ಬಾಲಕ ಮೃತಪಟ್ಟಿರುವ ಘಟನೆ ಮೂಡಿಗೆರೆ ಪಟ್ಟಣ ಸಮೀಪದ ಹ್ಯಾಂಡ್ ಪೋಸ್ಟ್ ನಲ್ಲಿ ನಡೆದಿದೆ.
ಹ್ಯಾಂಡ್ ಪೋಸ್ಟ್ ನಲ್ಲಿ ರಿಜ್ವಾನ್ ಎಂಬುವವರ ಕಾಫಿ ಎಸ್ಟೇಟ್ ಕೆರೆಯಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ.
ರಿಜ್ವಾನ್ ಅವರ ಕೂಲಿ ಲೈನಿನಲ್ಲಿ ಕೆಲಸಕ್ಕೆ ಇದ್ದ ಹಾಸನ ಮೂಲದ ತನ್ಮಯಿ(19 ವರ್ಷ), ಪುನೀತ್(12 ವರ್ಷ) ಮೃತಪಟ್ಟ ದುರ್ದೈವಿಗಳು.
ಕೂಲಿಲೈನಿನಲ್ಲಿ ವಾಸವಿದ್ದ ಕುಟುಂಬದವರು ನಿನ್ನೆ ಕೆಲಸ ಮುಗಿಸಿ ಸಂಜೆ ವೇಳೆ ತೋಟದ ಮಧ್ಯದಲ್ಲಿರುವ ಕೆರೆಯಲ್ಲಿ ಸಂದೀಪ್, ದಿವಾಕರ್, ತನ್ಮಯಿ ಮತ್ತು ಪುನೀತ್ ಮೀನು ಹಿಡಿಯಲು ತೆರಳಿದ್ದಾರೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ಪುನೀತ್ ಕೆರೆಯಲ್ಲಿ ಸಿಲುಕಿಕೊಂಡಿದ್ದು ಆತನನ್ನು ರಕ್ಷಿಸಲು ಹೋದ ತನ್ಮಯಿ ಕೂಡ ನೀರಿನಿಂದ ಮೇಲೆ ಬರಲಾಗದೇ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗಿದೆ.
ಈ ಕುಟುಂಬದವರು ರಿಯಾಜ್ ಎಂಬುವರ ತೋಟದಲ್ಲಿ ಸುಮಾರು 4 ವರ್ಷ ದಿಂದ ಕೊಲಿ ಕೆಲಸ ಮಾಡುತಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೂಡಿಗೆರೆ ಅಗ್ನಿಶಾಮಕ ಸಿಬ್ಬಂದಿಗಳು, ಮೂಡಿಗೆರೆ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ, ಸಕ್ರಿಯ ಸಮಾಜ ಸೇವಕರ ತಂಡ ಮತ್ತು ಕಾಫಿನಾಡು ಸಮಾಜ ಸೇವಕರ ತಂಡ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ