ದಿನದಿಂದ ದಿನಕ್ಕೆ ಮಲೆನಾಡಿನಲ್ಲಿ ಸಾಂಪ್ರದಾಯಿಕ ಗದ್ದೆನಾಟಿ ಕಣ್ಮರೆಯಾಗುತ್ತಿದೆ. ನಮ್ಮ ಹಿರಿಯರು ತಲತಲಾಂತರದಿಂದ ರೂಢಿಸಿಕೊಂಡು ಬಂದಿದ್ದ ಎತ್ತುಗಳಿಂದ ಗದ್ದೆ ಹೂಡುವುದು ಮತ್ತು ಜನರು ಸೇರಿ ನಾಟಿ ಮಾಡುವುದು ಕ್ರಮೇಣ ವಿರಳವಾಗುತ್ತಿದೆ. ಟ್ರಾಕ್ಟರ್, ಟಿಲ್ಲರ್, ಗದ್ದೆ ನಾಟಿ ಯಂತ್ರಗಳು ಬಂದ ನಂತರ ಸಾಂಪ್ರದಾಯಿಕ ವಿಧಾನಗಳಿಗೆ ವಿದಾಯ ಹೇಳಲಾಗುತ್ತಿದೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕಳಸ ತಾಲ್ಲೂಕಿನ ಹೊರನಾಡಿನಲ್ಲಿ ಸಾಂಪ್ರದಾಯಿಕ ಗದ್ದೆನಾಟಿಯ ವೈಭವವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಹೊರನಾಡನ ದೊಡ್ಮನೆ ಎಂದೇ ಪ್ರಸಿದ್ಧವಾಗಿರುವ ರಾಜೇಂದ್ರ ಪ್ರಸಾಸ್ ಹೆಗ್ಗಡೆ ಯವರ ಗದ್ದೆಯಲ್ಲಿ ನೂರಾರು ಮಂದಿ ಎತ್ತು, ಕೋಣಗಳನ್ನು ಬಳಸಿ ಉಳುಮೆ ಮಾಡುವುದು ಮತ್ತು ನಾಟಿಮಾಡುವುದು ಪ್ರತಿವರ್ಷ ನಡೆದುಕೊಂಡು ಬಂದಿದೆ.
ದೊಡ್ಮನೆ ದೇವರ ಗದ್ದೆ ಎಂದೇ ಹೆಸರುವಾಸಿಯಾಗಿರುವ ಸುಮಾರು 2 ಎಕರೆ ಗದ್ದೆಯನ್ನು ಸುತ್ತಲ ಜನರು ಮತ್ತು ದೂರದೂರಿನ ಜನರು ಬಂದು ಸ್ವಯಂಪ್ರೇರಿತರಾಗಿ ನಾಟಿ ಕಾರ್ಯದಲ್ಲಿ ತೊಡಗುತ್ತಾರೆ. ಇದನ್ನೊಂದು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ.
ಪ್ರತಿವರ್ಷದಂತೆ ಈ ವರ್ಷವೂ ಸುಮಾರು 600ಕ್ಕೂ ಅಧಿಕ ಮಂದಿ ಈ ನಾಟಿ ಹಬ್ಬದಲ್ಲಿ ಪಾಲ್ಗೊಂಡು ಪುನೀತರಾಗಿದ್ದಾರೆ. ಇಲ್ಲಿ ಯಾರೂ ಸಂಬಳಕ್ಕಾಗಿ ಬಂದು ಕೆಲಸ ಮಾಡುವುದಿಲ್ಲ. ಎಲ್ಲರೂ ಇದನ್ನೊಂದು ಭಕ್ತಿಭಾವದ ಕಾರ್ಯವೆಂದು ಎಣಿಸಿ ಸ್ವಯಂಪ್ರೇರಿತರಾಗಿ ನಾಟಿ ಕಾರ್ಯದಲ್ಲಿ ತೊಡಗುತ್ತಾರೆ. ಗದ್ದೆಯ ಮಾಲೀಕರು ಸಹ ಇದನ್ನೊಂದು ಲಾಭದಾಯಕ ಕಾರ್ಯವೆಂದು ಮಾಡುತ್ತಿಲ್ಲ, ನಮ್ಮ ಸಂಪ್ರದಾಯ ಮುಂದುವರಿಯಬೇಕು ಎಂಬ ಕಾಳಜಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಗದ್ದೆ ನಾಟಿಯ ದಿನ ಬಂದವರಿಗೆಲ್ಲಾ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಆನರು ಕೆಸರು ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ತೊಡಗಿ ಖುಷಿಪಡುತ್ತಾರೆ. ಧನ್ಯತಾ ಭಾವ ಅನುಭವಿಸುತ್ತಾರೆ.