ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಹ ಹುಮ್ಮಸ್ಸು ಮೂಡುತ್ತದೆ. ಹಾಗಾಗಿ ಯಾವುದೇ ರಂಗದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಮಂಡಳಿ ಸದಸ್ಯ ದಿನೇಶ್ ದೇವವೃಂದ ಹೇಳಿದರು.
ಅವರು ಬುಧವಾರ ಸಂಜೆ ಮೂಡಿಗೆರೆ ಪಟ್ಟಣದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಅವರ ಮನೆಯಲ್ಲಿ ಯುರೇಕಾ ಅಕಾಡೆಮಿ ಮೂಡಿಗೆರೆ ಶಾಖೆ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ, ಗುರಿ ಮತ್ತು ಸತತ ಪ್ರಯತ್ನದುಣದ ಉನ್ನತ ಸಾಧನೆ ಮಾಡಿ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಜಗತ್ತು ವೇಗವಾಗಿ ಬದಲಾಗುತ್ತಿದೆ. ಬದಲಾವಣೆಗೆ ತಕ್ಕಂತೆ ನಾವು ಕೂಡ ಯೋಜನೆ ಮತ್ತು ಯೋಚನೆ ರೂಪಿಸಿಕೊಂಡರೆ ಗುರಿ ತಲುಪಲು ಸಾಧ್ಯವಿದೆ ಎಂದು ಹೇಳಿದರು.
ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಸಾಮಾನ್ಯ ಕುಟುಂಬದಿಂದಲೇ ಹೆಚ್ಚಾಗಿ ಪ್ರತಿಭೆಗಳು ಹೊರಹೊಮ್ಮುತ್ತಾರೆ. ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ದೊರಕಿದಾಗ ಮಾತ್ರ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಪ್ರತಿಭೆಗಳಿಗೆ ಯಾವುದೊ ಒಂದು ರೀತಿಯಲ್ಲಿ ಸಹಾಯ ಸಿಗುತ್ತದೆ. ಅಲ್ಲದೇ ಸಮಾಜ ಕೂಡ ಜತೆಯಲ್ಲಿ ನಿಲ್ಲುತ್ತದೆ. ಹಾಗಾಗಿ ಪ್ರತಿಭೆಗಳು ಎದೆಗುಂದುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಐಟಿ, ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡಿ ಹೈದರಾಬಾದ್ ಐಐಟಿಯಲ್ಲಿ ವ್ಯಾಸಂಗ ಮಾಡಲು ಆಯ್ಕೆಯಾಗಿರುವ ದೀಕ್ಷಿತ್ ಪಟೇಲ್ ಮತ್ತು ಐಸ್ ಕರ್ಲಿಂಗ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಶ್ರೀಷಾ ಎಂ.ದೇವಾಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೀಕ್ಷಿತ್ ಪಟೇಲ್ ಮತ್ತು ಶ್ರೀಷಾ ಎಂ.ದೇವಾಂಗ್ ತಮ್ಮ ಸಾಧನೆಯ ಹಾದಿಯ ಪಯಣದ ಬಗ್ಗೆ ಮಾತನಾಡಿದರು. ಲೈಫ್ ಲೈನ್ ಸಂಸ್ಥೆಯ ಕಿಶೋಕ್ ಕುಮಾರ್ ಹೆಗ್ಡೆಯವರು ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸಿರುವುದಕ್ಕೆ ದೀಕ್ಷಿತ್ ಪಟೇಲ್ ಮತ್ತು ಶ್ರೀಷಾ ಎಂ. ದೇವಾಂಗ್ ಅವರ ಪೋಷಕರು ಕೃತಜ್ಞಾತಪೂರ್ವಕ ಸ್ಮರಿಸಿಕೊಂಡು ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಸನ್ನ ಗೌಡಹಳ್ಳಿ, ಮಗ್ಗಲಮಕ್ಕಿ ಗಣೇಶ್, ಮನೋಜ್ ಹಳೇಕೋಟೆ, ಶಿವಣ್ಣ ಬಿಳಗುಳ, ಪ್ರದೀಪ್ ಕಿತ್ತಲೆಗಂಡಿ ಮುಂತಾದವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ದೀಪಕ್ ದೊಡ್ಡಯ್ಯ ಅವರ ಅಭಿಮಾನಿಗಳು ಉಪಸ್ಥಿತರಿದ್ದರು. ಸುಂದ್ರೇಶ್ ಕೊಣಗೆರೆ ಕಾರ್ಯಕ್ರಮ ನಿರೂಪಿಸಿದರು, ಸುದೀಪ್ ಸ್ವಾಗತಿಸಿದರು.