ಪರಿಸರ ಜಾಗೃತಿ ನಮ್ಮೆಲರ ಹೊಣೆಯಾಗಿದ್ದು ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೆಟ್ಟಗೆರೆ ಗ್ರಾಮದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ನಡೆದ ಒಕ್ಕೂಟದ ಸರ್ವ ಸದಸ್ಯರಿಗೆ ಹಣ್ಣು ಹಂಪಲು ಗಿಡ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಯ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ. ಸ್ವಚ್ಚ ಹಾಗೂ ಆರೋಗ್ಯ ಪರಿಸರವನ್ನು ನಿರ್ಮಾಣ ಮಾಡಲು ಎಲ್ಲರೂ ಕಂಕಣ ಬದ್ದರಾಗಬೇಕಿದೆ. ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಗಿಡ ವಿತರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡುವಂತಾಗಿದೆ ಎಂದರು.
ವಲಯ ಅರಣ್ಯಾಧಿಕಾರಿಗಳಾದ ಮೋಹನ್ ಕುಮಾರ್ ಮಾತನಾಡಿ, ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರು ಕಾರ್ಯೋನ್ಮುಖರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೂವಮ್ಮ, ಮುಖಂಡರಾದ ಮನೋಜ್, ತಾಲೂಕು ಯೋಜನಾಧಿಕಾರಿ ಶಿವಾನಂದ್, ಶೌರ್ಯ ವಿಪತ್ತು ತಂಡದ ಮಾಸ್ಟರ್ ಪ್ರವೀಣ್ ಪೂಜಾರಿ, ಸಂಯೋಜಕರಾದ ರವಿ, ಲೋಕೇಶ್, ಆರೀಫ್, ಒಕ್ಕೂಟದ ಮಾಜಿ ಅಧ್ಯಕ್ಷರಾದ ಅಣ್ಣಪ್ಪ, ಕೃಷಿ ಮೇಲ್ವಿಚಾರಕರಾದ ರವಿಚಂದ್ರ. ವಲಯದ ಮೇಲ್ವಿಚಾರಕರಾದ ಲತಾ, ಮುಂತಾದವರು ಇದ್ದರು.