ಕಳೆದ ಕೆಲ ದಿನಗಳಿಂದ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮಲೆನಾಡಿನಾದ್ಯಂತ ಧಾರಾಕಾರ ಮಳೆ ಮುಂದುವರಿದಿದೆ. ಮಳೆಗಾಳಿಗೆ ಮಲೆನಾಡಿನ ಅನೇಕ ಕಡೆ ಅವಘಡಗಳು ಸಂಭವಿಸಿವೆ. ನದಿ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಳಸ ಮತ್ತು ಹೊರನಾಡು ನಡುವಿನ ಭದ್ರಾನದಿ ಸೇತುವೆ ಮೇಲೆ ತುಂಬಿ ಹರಿಯುತ್ತಿದೆ. ಅನೇಕ ಕಡೆ ಮರಗಳು ರಸ್ತೆಗುರುಳಿ ಸಂಚಾರ ವ್ಯತ್ಯಯ ಉಂಟಾಗಿದೆ.
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಕಳಸ ನಡುವೆ ಇರುವ ಸಂಪಿಗೆ ಖಾನ್ ಬಳಿ ಹುಲ್ಲು ಕುಯ್ಯಲು ಹೋಗಿದ್ದ ಶಂಕರೇಗೌಡ ಎಂಬುವವರ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಮರದ ಅಡಿಗೆ ಸಿಲುಕಿದ್ದ ಶಂಕರ್ ಗೌಡ ಅವರನ್ನು ಗ್ರಾಮಸ್ಥರು ಸೇರಿ ಕಳಸ ಅಸ್ಪತ್ರೆಗೆ ಕರೆತಂದಿದ್ದಾರೆ. ಗಂಭೀರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ಕಳಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದ್ಯೊಯಲಾಯಿತು.
ಮರ ಬಿದ್ದು ಜಖಂಗೊಂಡ ಕಾರು : ಮೂಡಿಗೆರೆ ತಾಲ್ಲೂಕಿನ ದುರ್ಗದಹಳ್ಳಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಪ್ರವಾಸಿ ಕಾರಿನ ಮೇಲೆ ಮರ ಬಿದ್ದು ಕಾರು ಜಖಂ ಗೊಂಡಿದೆ. ಪ್ರವಾಸಿಗರು ಕಾರು ನಿಲ್ಲಿಸಿ ಬಂಡಾಜೆ ಜಲಪಾತಕ್ಕೆ ಹೋಗಿದ್ದರಿಂದ ಕಾರಿನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ಜೀವಹಾನಿ ತಪ್ಪಿದಂತಾಗಿದೆ.
ಬಣಕಲ್ ಸಮೀಪದ ಜಾರ್ಗಲ್ ಗ್ರಾಮದ ಪ್ರಶಾಂತ್ ಅವರ ಮನೆ ಮಳೆಯಿಂದ ಜಖಂಗೊಂಡಿದೆ ಸ್ಥಳಕ್ಕೆ ಬೆಟ್ಟಗೆರೆ ಗ್ರಾಮ ಪಂಚಾಯಿತಿ ಪಿಡಿಒ ದರ್ಶನ್ ಭೇಟಿ ನೀಡಿ ಪರಿಶೀಲಿಸಿದರು.