ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನೀಡುವ ಸರ್. ಎಂ. ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಮತ್ತು ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ನಿನ್ನೆ ವಿತರಿಸಲಾಯಿತು.
ಜುಲೈ 22 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 2017-18, 2018-19, 2019-20ನೇ ಸಾಲಿನಲ್ಲಿ ಉತ್ಪಾದನಾ ಮತ್ತು ರಫ್ತು ವಲಯದ ವಿಭಿನ್ನ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ರಫ್ತು ವಿಭಾಗದಲ್ಲಿ ಉತ್ತಮ ಸಾಧನೆ ತೋರಿರುವ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮುದ್ರೆಮನೆ ಕಾಫಿ ಕ್ಯೂರರ್ಸ್ ಸಂಸ್ಥೆಯು ಜಿಲ್ಲೆಯ ಶ್ರೇಷ್ಠ ರಫ್ತು ಪ್ರಶಸ್ತಿಗೆ ಭಾಜನವಾಗಿದೆ.
ಮುದ್ರೆಮನೆ ಕಾಫಿ ಕ್ಯೂರರ್ಸ್ ಮಾಲೀಕರಾದ ಬಿ.ಎಸ್.ಸಂತೋಷ್ ಮತ್ತು ಅವರ ಪುತ್ರಿ ಮಾನ್ಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳು, ರಾಜ್ಯದ ಮುಂಚೂಣಿ ಉದ್ದಿಮೆದಾರರು ಉಪಸ್ಥಿತರಿದ್ದರು.
**********************
ಜಿಲ್ಲೆಯ ಶ್ರೇಷ್ಠ ರಫ್ತು ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿರುವ ಮುದ್ರೆಮನೆ ಕಾಫಿ ಕ್ಯೂರರ್ಸ್ ಕಾಫಿ ಸಂಸ್ಕರಣೆ ಮತ್ತು ರಫ್ತು ಉದ್ದಿಮೆಯಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಮೂಡಿಗೆರೆ ಸಮೀಪದ ಮುದ್ರೆÉಮನೆಯಲ್ಲಿ ಸುಸಜ್ಜಿತ ಕಾಫಿ ಕ್ಯೂರಿಂಗ್ ಘಟಕ ಹೊಂದಿದ್ದು, ಕಳೆದ ಎರಡೂವರೆ ದಶಕದಿಂದ ಕಾಫಿ ಸಂಸ್ಕರಣೆಯಲ್ಲಿ ತೊಡಗಿದೆ.
ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯು ಕಾಫಿ ರಫ್ತು ವಲಯದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಸಂಸ್ಕರಣೆ ಮಾಡಿದ ವಿವಿಧ ಶ್ರೇಣಿಯ ಕಾಫಿಯನ್ನು ನೇರವಾಗಿ ಇಟಲಿ, ಜರ್ಮನಿ ಸೇರಿದಂತೆ ಯುರೋಪ್ ನ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ. ಸಂಸ್ಥೆಯು ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಯನ್ನು ಮೂರನೇ ಬಾರಿಗೆ ತನ್ನದಾಗಿಸಿಕೊಂಡಿದೆ.
ಪ್ರಶಸ್ತಿ ಬಂದ ಸಂದರ್ಭದಲ್ಲಿ ಕಂಪನಿಯ ಮಾಲೀಕ ಬಿ.ಎಸ್. ಸಂತೋಷ್ ಅವರು ಪತ್ರಿಕೆಯೊಂದಿಗೆ ಮಾತನಾಡಿ ಮುದ್ರೆಮನೆ ಕಾಫಿ ಕ್ಯೂರರ್ಸ್ ನಲ್ಲಿ ಕಾಫಿ ಸಂಸ್ಕರಣೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಗುಣಮಟ್ಟದಲ್ಲಿ ಮಾಡಲಾಗುತ್ತಿದೆ. ಬೆಳೆಗಾರರಿಂದ ಕಾಫಿ ಹಣ್ಣನ್ನು ನೇರವಾಗಿ ಖರೀದಿಸಿ ಅದನ್ನು ಸಂಸ್ಕರಿಸಲಾಗುತ್ತಿದೆ. ಪರಿಸರ ಸ್ನೇಹಿಯಾಗಿ ನೆರಳಿನಾಶ್ರಯದಲ್ಲಿ ಬೆಳೆಯುವ ಭಾರತದ ಕಾಫಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚಿನ ಬೇಡಿಕೆ ಇದೆ. ಕಳೆದ ಒಂದು ವರ್ಷದಿಂದ ಕಾಫಿ ಬೆಲೆ ಏರುಗತಿಯಲಿ ಸಾಗುತ್ತಿದೆ. ಸರ್ಕಾರ ಕಾಫಿ ಬೆಳೆಗೆ ಮತ್ತು ಉದ್ದಿಮೆಗೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ. ಕಾಫಿ ಉದ್ದಿಮೆ ದೃಢವಾಗಿ ಬೆಳೆದರೆ ಅದರ ನೇರ ಅನುಕೂಲ ಬೆಳೆಗಾರರಿಗೆ ದೊರಕುತ್ತದೆ. ಮೂರನೇ ಬಾರಿ ಶ್ರೇಷ್ಠ ರಫ್ತು ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದಿದ್ದಾರೆ.