ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ನಾಳೆ ಚಾಲನೆ ದೊರಕಲಿದ್ದು, ನಾಡಿದ್ದು ಅಂದರೆ ಜುಲೈ 20ರಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳನ್ನು ಅವಲಂಭಿಸದೇ ಉಚಿತವಾಗಿ ನೊಂದಣಿ ಮಾಡಿಸಿಕೊಳ್ಳಬಹುದು ಎಂದು ವಿವರ ನೀಡಿದ್ದಾರೆ. ಹಾಗೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರಕಟಣೆಯನ್ನು ಸಹ ಹೊರಡಿಸಲಾಗಿದೆ.
ಪಡಿತರ ಚೀಟಿ (ಬಿ.ಪಿ.ಎಲ್., ಎ.ಪಿ.ಎಲ್, ಅಂತ್ಯೋದಯ ಕಾರ್ಡ್) ಹೊಂದಿರುವ ಕುಟುಂಬದ ಯಜಮಾನಿ ಖಾತೆಗೆ ಪ್ರತಿತಿಂಗಳು ರೂ. 2000(ರೂ. ಎರಡು ಸಾವಿರ) ಪ್ರೋತ್ಸಾಹ ಧನವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯ ಸೌಲಭ್ಯ ಪಡೆಯಲು ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೊಂದಾಯಿಸಿಕೊಳ್ಳಬಹುದು. ಅಥವಾ ಸರ್ಕಾರ ಪ್ರತಿ ಗ್ರಾಮಕ್ಕೆ ನೇಮಿಸುವ “ಪ್ರಜಾಪ್ರತಿನಿಧಿಗಳು” ಹೆಸರಿನ ಸ್ವಯಂಸೇವಕರು ಫಲಾನುಭವಿಗಳ ಮನೆಮನೆಗೆ ತೆರಳಿ ನೊಂದಾಯಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನೊಂದಣಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ ಜೊತೆಗೆ ಪತಿಯ ಆಧಾರ್ ಕಾರ್ಡ್ ತರಬೇಕು. ದಾಖಲೆಗಳ ಜೊತೆಗೆ ಮೊಬೈಲ್ ಸಹ ತರಬೇಕು ಎಂದು ಅವರು ತಿಳಿಸಿದ್ದಾರೆ.
ಫಲಾನುಭವಿ ಮಹಿಳೆ ಅಥವಾ ಆಕೆಯ ಪತಿ ಆಧಾಯ ತೆರಿಗೆ(IT Return) ಪಾವತಿದಾರರಾಗಿದ್ದರೆ ಅಥವಾ ಜಿಎಸ್ಟಿ (GST) ರಿಟರ್ನ್ ಸಲ್ಲಿಸುತ್ತಿದ್ದರೆ ಅಂಹತ ಮಹಿಳೆಗೆ ಯೋಜನೆಯಲ್ಲಿ ಪ್ರೋತ್ಸಾಹ ಧನ ಪಡೆಯಲು ಅವಕಾಶವಿಲ್ಲ ಎಂಬ ನಿಬಂಧನೆ ಹೇರಲಾಗಿದೆ.
ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ 8147500500 ಗೆ ಪಡಿತರ ಚೀಟಿ ಸಂಖ್ಯೆಯನ್ನು ಎಸ್.ಎಂ.ಎಸ್. ಮಾಡಿದರೆ ನೊಂದಣಿಗೆ ನಿಗದಿಮಾಡಿರುವ ಸ್ಥಳ, ದಿನಾಂಕ ಮತ್ತು ಸಮಯದ ಮಾಹಿತಿ ಬರುತ್ತದೆ. ಅಥವಾ ಯೋಜನೆಯ ಬಗ್ಗೆ ಯಾವುದೇ ಗೊಂದಲವಿದ್ದರೆ 1902 ಸಂಖ್ಯೆಗೆ ಕರೆಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿರುತ್ತದೆ.