ಮೂಡಿಗೆರೆ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬುಧವಾರ ನೆರವೇರಿತು. 2023-24ನೇ ಸಾಲಿನ ಸಂಸ್ಥೆಯ ಅಧ್ಯಕ್ಷರಾಗಿ ಕೆ.ಎಲ್.ಎಸ್. ತೇಜಸ್ವಿ ಅಧಿಕಾರ ವಹಿಸಿಕೊಂಡರು.
ಕಳೆದ ಸಾಲಿನ ಅಧ್ಯಕ್ಷ ಹೆಚ್.ಆರ್. ಪ್ರದೀಪ್ ಕುಮಾರ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿಯಾಗಿ ಎಸ್. ಸಚಿನ್ ಕಳೆದ ಸಾಲಿನ ಕಾರ್ಯದರ್ಶಿ ಬಿ.ವರುಣ್ ಅವರಿಂದ ಜವಾಬ್ದಾರಿ ವಹಿಸಿಕೊಂಡರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಎಂ. ಲಕ್ಷ್ಮೀನಾರಾಯಣ್ ಅವರು ಮಾತನಾಡಿ ವಿಶ್ವ ಮಾನವ ತತ್ವವನ್ನು ನೈಜ ಅರ್ಥದಲ್ಲಿ ಅಳವಡಿಸಿಕೊಂಡಿರುವ ರೋಟರಿ ಸಂಸ್ಥೆ ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಸಂಸ್ಥೆಯಲ್ಲಿ ಅಧ್ಯಕ್ಷರ ಅವದಿ 1 ವರ್ಷ ಸೀಮಿತವಾಗಿದ್ದರಿಂದ ಹಾಕಿಕೊಂಡಿರುವ ಯೋಜನೆಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ಕಷ್ಟವಾಗಬಹುದು. ಹಾಗಾಗಿ ಈಗಲೇ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಚರ್ಚೆ ನಡೆಸಿ ಮುಂದಿನ 3 ವರ್ಷಕ್ಕೆ ಆಗುವಷ್ಟು ಜನಪರ ಯೋಜನೆ ರೂಪಿಸಿಕೊಳ್ಳಬೇಕು. ಆಗ ಮಾತ್ರ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಂಸ್ಥೆ ಜಾತಿ, ಧರ್ಮದ ಆಧಾರದಲ್ಲಿ ನಡೆಯಬಾರದು. ಅಲ್ಲದೇ ಸಂಸ್ಥೆಯಲ್ಲಿ ಸೀಮಿತ ವರ್ಗಕ್ಕೆ ಬೆಂಬಲ ಸೂಚಿಸದೇ ಎಲ್ಲಾ ವರ್ಗದ ಜನರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಬೇಕೆಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಕೆ.ಎಲ್.ಎಸ್.ತೇಜಸ್ವಿ ಅಧಿಕಾರ ಸ್ವೀಕರಿಸಿ ಮಾತನಾಡಿ, ತನ್ನ ಅಧಿಕಾರದ ಅವದಿಯಲ್ಲಿ ಸಂಸ್ಥೆಗೆ ಯಾವುದೇ ದಕ್ಕೆಯಾಗದ ರೀತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ. ಮಕ್ಕಳ, ಮಹಿಳೆಯರ ಸಬಲೀಕರಣ, ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ಎಲ್ಲಾ ನ್ಯೂನ್ಯತೆ ಬಗ್ಗೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಚರ್ಚಿಸಿ, ಎಲ್ಲರ ಸಲಹೆ, ಸಹಕಾರ ಪಡೆದು ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರ ವಿತರಿಸಲಾಯಿತು. ಸಿಇಟಿ, ಜೆಇಇ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಬಿ.ಯು.ದೀಕ್ಷಿತ್ ಪಟೇಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಳೆದ ಸಾಲಿನ ಅಧ್ಯಕ್ಷ ಹೆಚ್.ಆರ್. ಪ್ರದೀಪ್ ಕುಮಾರ್ ಅವರು ತಮ್ಮ ಅವಧಿಯಲ್ಲಿ ಸೇವಾ ಕಾರ್ಯಗಳಿಗೆ ನೆರವು ನೀಡಿದ ಮಹನೀಯರ ಸಹಕಾರವನ್ನು ಸ್ಮರಿಸಿದರು. ಮೂಡಿಗೆರೆ ರೋಟರಿ ಮುಕ್ತಿಧಾಮದಲ್ಲಿ ಸಾಲಿನಲ್ಲಿ ವಿವಿಧ ಸರ್ಕಾರಿ ಅನುದಾನ ಮತ್ತು ದಾನಿಗಳ ನೆರವಿನಿಂದ 15 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸುಸ್ಥಿತಿಗೆ ತರಲಾಗಿದೆ ಎಂದರು.
ಬಿ.ವರುಣ್ ಅವರು ಕಳೆದ ಸಾಲಿನ ಕಾರ್ಯಕ್ರಮಗಳ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ 4 ಮಂದಿ ನೂತನ ಸದಸ್ಯರು ಸಂಸ್ಥೆಗೆ ಸೇರ್ಪಡೆಯಾದರು.
ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗೌವರ್ನರ್ ವಿನೋದ್ ಕುಮಾರ್ ಶೆಟ್ಟಿ, ಜೋನಲ್ ಲೆಪ್ಟಿನೆಂಟ್ ಡಿ.ಎಂ.ಶೈಲೇಶ್ ಭಾಗವಹಿಸಿದ್ದರು.