ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಜಿ.ಅಗ್ರಹಾರ ಗ್ರಾಮದಲ್ಲಿ ನಿವೇಶನ ರಹಿತ ದಲಿತ ಕುಟುಂಬಗಳಿಗೆ ಸರಕಾರಿ ಭೂಮಿಯನ್ನು ನಿವೇಶನಕ್ಕಾಗಿ ಕಾಯ್ದಿರಿಸಬೇಕೆಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದರೂ ಅಧಿಕಾರಿಗಳು ಒತ್ತಡಕ್ಕೆ ಮಣಿದು ಪ್ರಭಾವಿಗಳಿಗೆ ಭೂಮಿ ಮಂಜೂರು ಮಾಡಿಕೊಟ್ಟಿದಾರೆಂದು ಅಗ್ರಹಾರ ಗ್ರಾಮಸ್ಥರು ದೂರಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಸಂತೋಷ್ ಅವರು, ತಾಲೂಕಿನ ಅಗ್ರಹಾರ ಗ್ರಾಮದ ಸರ್ವೆ ನಂ 565 ನಲ್ಲಿ 14 ಎಕರೆ ಭೂಮಿ ಈ ಹಿಂದೆ ಸರಕಾರಿ ಗೋಮಾಳ, ನಡುತೋಪು ಪ್ರದೇಶವಿತ್ತು. ಆ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಜಾತಿಯ ಗಿಡ ಮರಗಳನ್ನು ಬೆಳೆಸಿದ್ದಾರೆ. ಆ ಭೂಮಿಯನ್ನು ಅಗ್ರಹಾರ ಪರಿಶಿಷ್ಟ ಜಾತಿ ಕಾಲೂನಿಯ ಗ್ರಾಮಸ್ಥರಿಗೆ ನಿವೇಶನಕ್ಕಾಗಿ ಕಾಯ್ದಿರಿಸಿಕೊಂಡು ನಿವೇಶನ ಹಂಚಿಕೆ ಮಾಡಿಕೊಡಬೇಕೆಂದು ಹಿಂದಿನಿಂದಲೂ ಗ್ರಾಮಸ್ಥರು ಒತ್ತಾಯಿಸುತ್ತಾ ಬಂದಿದ್ದರು. ಆದರೆ ಅಧಿಕಾರಿಗಳು ಪ್ರಭಾವಿ ವಕ್ತಿಗಳಿಗೆ ಈ ಭೂಮಿ ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆಂದು ಆರೋಪಿಸಿದರು.
ಅಧಿಕಾರಿಗಳು ಪ್ರಭಾವಿಗಳಿಗೆ ಮಂಜೂರು ಮಾಡಿಕೊಟ್ಟ ಭೂಮಿಯಲ್ಲಿ ಇದೂವರೆಗೂ ಕಾಫಿ, ಕಾಳು ಮೆಣಸು ಸೇರಿದಂತೆ ಯಾವುದೇ ಗಿಡಗಳನ್ನು ಹಾಕದೇ ಕೃಷಿ ಚಟುವಟಿಕೆ ನಡೆಸದೇ ಹಾಗೆಯೇ ಪಾಳು ಬಿಡಲಾಗಿದೆ. ನಿಜವಾಗಿಯೂ ಜಾಗ ಮಂಜೂರು ಮಾಡಿದ್ದರೆ ಅಲ್ಲಿ ಕೃಷಿ ಚಟುವಟಿಕೆ ನಡೆಸಬೇಕಿತ್ತು ಎಂದು ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಮಂಜೂರಾಗಿದ್ದ ಜಾಗವನ್ನು ರದ್ದುಗೊಳಿಸಿ, ಆ ಜಾಗವನ್ನು ಅಗ್ರಹಾರ ಕಾಲೋನಿ ಪರಿಶಿಷ್ಟ ಜಾತಿ ಗ್ರಾಮಸ್ಥರಿಗೆ ನಿವೇಶನಕ್ಕಾಗಿ ಕಾಯ್ದಿರಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸುನೀಲ್ಕುಮಾರ್ ಅಗ್ರಹಾರ ಉಪಸ್ಥಿತರಿದ್ದರು.