ತಮ್ಮ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದೇ ಅನಾರೋಗ್ಯಕ್ಕೀಡಾದ ಹಿರಿಯ ಮಹಿಳೆಯನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸೇರಿ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕಳ್ಕೋಡು ಸಮೀಪದ ಈಚಲವಳ್ಳಿ ಗ್ರಾಮದಲ್ಲಿ ಅನಾರೋಗ್ಯಪೀಡಿತ 70 ವರ್ಷದ ಶೇಷಮ್ಮ ಎಂಬುವವರನ್ನು ಕಿಲೋಮೀಟರ್ ವರೆಗೆ ಜೋಳಿಗೆಯಲ್ಲಿ ಹೊತ್ತು ಮುಖ್ಯರಸ್ತೆಗೆ ತಂದು ನಂತರ ವಾಹನದಲ್ಲಿ ಕಳಸ ಆಸ್ಪತ್ರೆಗೆ ಸೇರಿಸಿದ್ದಾರೆ.
ಇಲ್ಲಿಗೆ ರಸ್ತೆ ನಿರ್ಮಿಸಲು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಜೊತೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರಸ್ತೆ ನಿರ್ಮಿಸಲು ಅರಣ್ಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಗ್ರಾಮಕ್ಕೆ ಬೇಕಾಗಿರುವುದು ಕೇವಲ ಒಂದು ಕಿಲೋಮೀಟರ್ ರಸ್ತೆಯಷ್ಟೇ. ಆದರೆ ಇದುವರೆಗೂ ಈ ಗ್ರಾಮಕ್ಕೆ ರಸ್ತೆಯ ಭಾಗ್ಯ ಕೂಡಿಬಂದಿಲ್ಲ. ಗ್ರಾಮದ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿಯೇ ಬದುಕು ನಡೆಸುತ್ತಿದ್ದಾರೆ.
ಕ್ಷೇತ್ರದ ನೂತನ ಶಾಸಕರು ಈ ಬಗ್ಗೆ ಗಮನಹರಿಸಿ ರಸ್ತೆ ನಿರ್ಮಿಸಿಕೊಟ್ಟು ಈಚಲವಳ್ಳಿ ಗ್ರಾಮಸ್ಥರು ಅನುಭವಿಸುತ್ತಿರುವ ಕಷ್ಟವನ್ನು ನಿವಾರಿಸಬೇಕು ಎಂದು ಗ್ರಾಮಸ್ಥರು ನಿರೀಕ್ಷೆಯಲ್ಲಿದ್ದಾರೆ.
ವರದಿ : ತನು ಕೊಟ್ಟಿಗೆಹಾರ