ನಿನ್ನೆ ಮಧ್ಯಾಹ್ನ ಮೂಡಿಗೆರೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆಗೆ ಸಂಚರಿಸುವ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಗಾತ್ರದ ಮರವನ್ನು ಇಂದು ತೆರವುಗೊಳಿಸಲಾಗಿದೆ. ಇದರಿಂದ ದೇವರಮನೆಗೆ ತೆರಳಲು ಪ್ರವಾಸಿಗರಿಗೆ ಅನುವು ಆಗಿದೆ.
ತಾಲ್ಲೂಕಿನ ಹೆಸಗೋಡು ಸಮೀಪ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿತ್ತು. ಇದರಿಂದಾಗಿ ದೇವರಮನೆ ಗುತ್ತಿ ಗ್ರಾಮದ ಕಡೆಗೆ ತೆರಳುವು ಪ್ರಮುಖ ಸಂಪರ್ಕ ರಸ್ತೆ ಬಿಳ್ಳೂರು-ಗುತ್ತಿ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತಾಗಿತ್ತು.
ಈ ಬಗ್ಗೆ ಪತ್ರಿಕೆ ಮಾಹಿತಿ ಪ್ರಕಟಿಸಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿತ್ತು. ಪತ್ರಿಕೆಯ ಮಾಹಿತಿಯನ್ನು ಗಮನಿಸಿ ಶಾಸಕಿ ನಯನ ಮೋಟಮ್ಮ ಅವರು ಮರವನ್ನು ಶೀರ್ಘ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇಂದು ಬೆಳಿಗ್ಗೆ ಯಂತ್ರಗಳನ್ನು ತಂದು ಸ್ಥಳೀಯರ ನೆರವಿನೊಂದಿಗೆ ಮರವನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಸಿದ್ದಾರೆ.