ತೋಟಗಾರಿಕಾ ಇಲಾಖೆ ಪ್ರಕಟಿಸಿರುವ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸದ್ಯಕ್ಕೆ ರಾಜ್ಯದ ಐದು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗುವಂತೆ ಅನುಷ್ಠಾನಕ್ಕೆ ತಂದಿದೆ. ಉಳಿದ 25 ಜಿಲ್ಲೆಗಳಿಗೆ ಬೆಳೆವಿಮೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಈಗ ಹೊರಡಿಸಿರುವ ಪ್ರಕಟಣೆಯಲ್ಲಿ ರಾಜ್ಯದ ಹಾಸನ, ಉಡುಪಿ, ತುಮಕೂರು, ಧಾರವಾಡ, ಕೋಲಾರ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಹವಮಾನ ಆಧಾರಿತ ಬೆಳೆವಿಮೆ ಯೋಜನೆಯಡಿಯಲ್ಲಿ ಅಡಿಕೆ, ಕಾಳುಮೆಣಸು ಸೇರಿದಂತೆ ಒಟ್ಟು 11 ಬೆಳೆಗಳಿಗೆ ಪ್ರಿಮಿಯಂ ಮೊತ್ತ ಪಾವತಿಸಲು ತೋಟಗಾರಿಕಾ ಇಲಾಖೆ ಗುರುವಾರ ಪ್ರಕಟಣೆ ಹೊರಡಿಸಿದೆ. ಆದರೆ ಆ ಪ್ರಕಟಣೆಯನ್ನು ನೋಡಿ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಬ್ಯಾಂಕುಗಳಿಗೆ ತೆರಳಿ ಬೆಳೆವಿಮೆ ಪಾವತಿಸಲು ಮುಂದಾದಾಗ ಬ್ಯಾಂಕುಗಳಿಗೆ ಯಾವುದೇ ರೀತಿಯ ಮಾಹಿತಿ ಬಂದಿರುವುದಿಲ್ಲ. ಹಾಗಾಗಿ ಬೆಳೆವಿಮೆ ಬಗ್ಗೆ ಕೃಷಿಕರು ಗೊಂದಲಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಕರ್ನಾಟಕ ಬೆಳೆಗಾರರ ಒಕ್ಕೂಟ ರಾಜ್ಯ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದೆ.
ಹವಮಾನ ಆಧಾರಿತ ಬೆಳೆವಿಮೆಯಡಿಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮೆ ಕಟ್ಟಲು ಕಾಫಿ ಬೆಳೆಯುವ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೂ ಅಧಿಸೂಚನೆ ಹೊರಡಿಸಿ ಇಲ್ಲಿನ ರೈತರಿಗೂ ಅವಕಾಶ ನೀಡಬೇಕು. ಹಾಸನ ಜಿಲ್ಲೆಯ ರೈತರಿಗೆ ನೀಡಿರುವ ಕೊನೆಯ ದಿನಾಂಕ ಜುಲೈ 15ನ್ನು ವಿಸ್ತರಿಸಿ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕೆ.ಜಿ.ಎಫ್. ಅಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್ ಮನವಿ ಮಾಡಿದ್ದಾರೆ.
ಮಲೆನಾಡು ಭಾಗದಲ್ಲಿ ಈಗಾಗಲೇ ಮಳೆಸುರಿಯಲು ಪ್ರಾರಂಭಿಸಿದೆ. ಆದರೆ ಇದೂವರೆಗೆ ವಿಮೆ ಪಾವತಿಸಲು ದಿನಾಂಕಗಳನ್ನು ನಿಗದಿಪಡಿಸಿಲ್ಲ. ಸರ್ಕಾರದ ಮತ್ತು ವಿಮಾ ಕಂಪನಿಗಳ ಬೇಜವಾಬ್ದಾರಿಯಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿದೆ.