ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಣಾ ಅಧಿನಿಯಮ-2020 (ಗೋಹತ್ಯೆ ನಿಷೇಧ)
ರದ್ದುಪಡಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು,`ಗೋಹತ್ಯೆ ನಿಷೇಧಕಾಯ್ದೆಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ಸಚಿವರ ಉತ್ತರದಿಂದ ತೃಪ್ತರಾಗದ ರವಿಕುಮಾರ್, `ಮೈಸೂರಿನಲ್ಲಿ ಪಶು ಸಂಗೋಪನಾ ಸಚಿವರೇ ಎಮ್ಮೆ,ಕೋಣಗಳನ್ನು ಕಡಿಯುವುದಾದರೆ ಗೋವುಗಳನ್ನು ಯಾಕೆ ಕಡಿಯಬಾರದು ಎಂದು ಹೇಳಿಕೆ ನೀಡಿದ್ದಾರೆ.ಆದರೆ, ಈಗ ಸದನದಲ್ಲಿ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ’ ಎಂದರು.
`ರಾಜ್ಯದಲ್ಲಿ ಸಾವಿರಾರು ಗೋವುಗಳ ಹತ್ಯೆ ನಡೆಯುತ್ತಿದೆ ಮತ್ತು ಅಕ್ರಮವಾಗಿ ಸಾಗಿಸಲಾಗುತ್ತಿದೆ.ಆದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದ ಕಾಯ್ದೆ ಕುರಿತು ದ್ವಂಧ್ವ ಹೇಳಿಕೆಗಳನ್ನು ನೀಡುತ್ತಿರುವ ಸರ್ಕಾರ ತಕ್ಷಣವೇ ನಿಲುವು ಸ್ಪಷ್ಟಪಡಿಸಲೇಬೇಕು’ ಎಂದು ಒತ್ತಾಯಿಸಿ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು.ರವಿಕುಮಾರ್ ಅವರೊಂದಿಗೆ ಬಿಜೆಪಿಯ ಇತರ ಸದಸ್ಯರು ಜತೆಗೂಡಿದರು.
ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಹೀಗಾಗಿ, ಬಿಜೆಪಿ ಸದಸ್ಯರು ಧರಣಿ ಅಂತ್ಯಗೊಳಿಸಿದರು.