ಸಮಾಜದಲ್ಲಿ ಯಾವುದೇ ಟ್ರಸ್ಟ್ಗಳನ್ನು ಪ್ರಾರಂಭಿಸಬಹುದು. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಕಷ್ಟಕರವಾಗಿರುತ್ತದೆ. ಅಂತಹ ಸಂದರ್ಭದಲ್ಲಿಯೂ ವಿಎಂಪಿಎಂ ಟ್ರಸ್ಟ್ ಸಾಮಾಜಿಕ ಕಳಕಳಿಯೊಂದಿಗೆ ಸೇವಾ ಚಟುವಟಿಕೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಡಾ.ವಿಜಯಕುಮಾರ್ ಅವರೇಕಾಡು ಹೇಳಿದರು.
ಅವರು ಮಂಗಳವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ವಿಎಂಪಿಎಂ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪುರಸ್ಕಾರವನ್ನು ಪಡೆದಿರುವ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದೊಂದಿಗೆ ಸಮಾಜದಲ್ಲಿ ಉನ್ನತ ಹುದ್ದೆಗ್ಗೇರಬೇಕು. ಶಿಕ್ಷಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿದೆ. ಹಾಗಾಗಿ ಪೋಷಕರು ತಮ್ಮ ಮಕಳ್ಳ ಶಿಕ್ಷಣದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು. ಒಳ್ಳೆಯ ಕೆಲಸ ಮಾಡುತ್ತಿರುವ ಟ್ರಸ್ಟ್ಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಕಾಫಿ ಬೆಳೆಗಾರ ಬಿ.ಎಸ್.ಜಯರಾಂಗೌಡ ಮಾತನಾಡಿ, ವಿ.ಪಿ. ನಾರಾಯಣ ಮತ್ತು ಭಾಗ್ಯ ದಂಪತಿಗಳು ತಮ್ಮ ಪೋಷಕರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಹಲವಾರು ಸಮಾಜಮುಖಿ ಕಾರ್ಯ ಮಾಡಿರುವುದು ಉತ್ತಮ ಬೆಳವಣಿಗೆ. ಟ್ರಸ್ಟ್ನಿಂದ 20 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದಂತಾಗಿದೆ. ಈ ಟ್ರಸ್ಟ್ನಿಂದ ಇನ್ನಷ್ಟು ಜನಪರವಾದ ಕಾರ್ಯಕ್ರಮಗಳು ನೆರವೇರಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ದ್ವಿತಿಯಾ ಪಿ.ಯು.ಸಿ, ಎಸ್.ಎಸ್.ಎಲ್.ಸಿ.ಯಲ್ಲಿ ತಾಲ್ಲೂಕಿಗೆ ಉನ್ನತ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ಬಡ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಲೇಖನ ಪರಿಕರಗಳನ್ನು ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ವಿ.ಪಿ.ನಾರಾಯಣ್, ಕಾರ್ಯದರ್ಶಿ ಭಾಗ್ಯ ನಾರಾಯಣ್, ಸುನೀಲ್ ದೇವಾಡಿಗ, ವಕೀಲರ ಸಂಘದ ಅಧ್ಯಕ್ಷ ಸಿದ್ದಯ್ಯ, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಗಿರೀಶ್, ಒಕ್ಕಲಿಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ಗೌಡ, ಉದ್ಯಮಿ ಶೇಷಪ್ಪಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಆಚಾರ್, ಕವಿತಾ ಲೋಕೇಶ್, ನಾರಾಯಣ, ಎಂ.ಎಸ್. ನಾಗರಾಜು, ಪ್ರಕಾಶ್, ನವೀನ್, ವಿನೋದ್, ಹಸೈನಾರ್ ಮತ್ತಿತರರಿದ್ದರು.