ಪ್ರಕೃತಿ ಕಾಪಾಡಲು ಪದವಿ, ಪಿಎಚ್ಡಿ ಬೇಕಾಗಿಲ್ಲ. ವನ್ಯ ಜೀವಿಗಳನ್ನು ಸ್ವತಂತ್ರವಾಗಿ ಬದುಕಲು ಸಾಧ್ಯವಾಗದೇ ಭಯದಲ್ಲಿ ಜೀವಿಸಬೇಕಾಗಿದೆ. ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ ಸಿಗದೇ ನಾಡಿಗೆ ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಾನವ ಮತ್ತು ಪ್ರಾಣಿ ಸಂಘರ್ಷ ಉಂಟಾಗುತ್ತಿದೆ. ಹಾಗಾಗಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗೆ ಅವಶ್ಯಕತೆ ಇರುವ ಆಹಾರ ಅರಣ್ಯದಲ್ಲಿಯೇ ಸಿಗುವಂತೆ ಗಿಡಗಳನ್ನು ಬೆಳೆಸಬೇಕೆಂದು ಸಾಹಿತಿ ಧನಂಜಯ ಜೀವಾಳ ಒತ್ತಾಯಿಸಿದರು.
ಅವರು ಗುರುವಾರ ಮೂಡಿಗೆರೆ ಪಟ್ಟಣದ ಸಿಡಿಪಿಒ ಕಚೇರಿ ಎದುರಿನ ಬಾಲಭವನ ಆವರಣದಲ್ಲಿ ವಿವಿಧ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಳೆ ಕಾಡುಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ಸ್ವಾರ್ಥದಿಂದಾಗಿ ಅರಣ್ಯ ಸಂಪತ್ತು ಇಂದು ನಶಿಸುತ್ತಿದೆ. ಅರಣ್ಯ ಉಳಿಸಲು ಯುವ ಜನಾಂಗ ಮುಂದಾಗದಿದ್ದರೆ ಮುಂದಿನ ದಿನದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.
ಬಿಇಒ ಹೇಮಂತ್ರಾಜ್ ಮಾತನಾಡಿ, ಪ್ರಕೃತಿ ಸ್ವರ್ಗಕ್ಕಿಂತ ಮಿಗಿಲಾಗಿದ್ದು, ಭೂಮಿ ಮತ್ತು ಪ್ರಕೃತಿ ಹೊಂದಾಣಿಕೆಯಿಂದಾಗಿ ಮಾನವ ಹಾಗೂ ಜೀವ ಸಂಕುಲಗಳಿಗೆ ಬದುಕಲು ಅವಕಾಶ ಮಾಡಿಕೊಟ್ಟಿದೆ. ಆದರೆ ಮಾನವ ಭೂಮಿ ತಾಯಿಯ ಬಾಯಿಯನ್ನು ಅಗಲಿಸಿ ಪ್ಲಾಸ್ಟಿಕ್ ನಂತಹ ಮಾರಕ ವಸ್ತುಗಳನ್ನು ಹಾಕುತ್ತಿರುವುದಲ್ಲದೇ ರಾಸಾಯನಿಕ ಗೊಬ್ಬರಗಳನ್ನು ಸುರಿದು ಮಣ್ಣಿನ ಫಲವತ್ತತೆ ಹಾಳು ಮಾಡಲಾಗುತ್ತಿದೆ. ಹಾಗಾಗಿ ಭೂಮಿಗೆ ಮಾರಕವಾಗುವ ವಸ್ತುಗಳನ್ನು ಹಾಕುವುದನ್ನು ನಿಲ್ಲಿಸಿ ಪ್ರಕೃತಿ ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಕರೆ ನೀಡಿದರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಪ್ರಕೃತಿ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸಿಎಫ್ ರಾಜೇಶ್ ನಾಯಕ್, ಆರ್ಎಫ್ಒ ಮೋಹನ್ ಕುಮಾರ್ , ಸಿಡಿಪಿಒ ವೀರೇಶ್, ಅರಣ್ಯ ಇಲಾಖೆಯ ರಮೇಶ್, ನವೀನ್, ಹೇಮಂತ್, ಸುರೇಶ್ ಮತ್ತಿತರರಿದ್ದರು.
ನಿರಂತರ ಸುದ್ದಿಗಳಿಗೆ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/IkFCXal7O5ODMBHsmKv9ak