ಹಾಸನ ಬೇಲೂರು ಹೆದ್ದಾರಿಯಲ್ಲಿ ಸಂಕೇನಹಳ್ಳಿ ಸಮೀಪ ಕಾರು ಮತ್ತು ಮಿನಿ ಕ್ಯಾಂಟರ್ ವಾಹನದ ನಡುವಿನ ಅಪಘಾತದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ಮೂಗ್ತಿಹಳ್ಳಿ ಮೂಲದ ಎಂ.ಪಿ. ಅನಿಕ್ ಗೌಡ(19 ವರ್ಷ) ಮೃತ ವಿದ್ಯಾರ್ಥಿ. ಬೆಂಗಳೂರಿನ ಸೈಂಟ್ ಜೋಸೆಪ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದ ಅನಿಕ್ ನಿನ್ನೆ ಕಾರಿನಲ್ಲಿ ತನ್ನ ಸಂಬಂಧಿಕರೊಂದಿಗೆ ಹಾಸನ ಕಡೆಗೆ ತೆರಳುತ್ತಿದ್ದಾಗ ಹಾಸನ ಕಡೆಯಿಂದ ಬರುತ್ತಿದ್ದ ಮಿನಿ ಕ್ಯಾಂಟರ್ ಗಾಡಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ ಅನಿಕ್ ತೀವ್ರವಾಗಿ ಗಾಯಗೊಂಡು ಅಸುನೀಗಿದ್ದಾರೆ. ಕಾರು ಚಲಾಯಿಸುತ್ತಿದ್ದ ಅನಿಕ್ ಅತ್ತೆ ಮಗ ಅಹನ್ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನಿಕ್ ಚಿಕ್ಕಮಗಳೂರು ಸಮೀಪದ ಮೂಗ್ತಿಹಳ್ಳಿ ಗ್ರಾಮದ ಕಾಫಿ ಬೆಳೆಗಾರರಾದ ಪ್ರವೀಣ್ ಮತ್ತು ದಮಯಂತಿ ದಂಪತಿಗಳ ಪುತ್ರ. ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಸಣ್ಣಸಿದ್ದೇಗೌಡರ ಮರಿಮಗ.
ಅನಿಕ್ ಸಾವಿನಿಂದ ಅವರ ಕುಟುಂಬ, ಬಂಧುಗಳು, ಸ್ನೇಹಿತರು ಶೋಕತಪ್ತರಾಗಿದ್ದಾರೆ. ಅನಿಕ್ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಕಡುವಿನಗುಂಡಿ ಕೃಷ್ಣಗಿರಿ ಎಸ್ಟೇಟ್ ನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಮೊಮ್ಮಗನ ಸಾವಿನ ಆಘಾತದಿಂದ ಅಸುನೀಗಿದ ಅಜ್ಜಿ
ಅಪಘಾತದಲ್ಲಿ ಕೊನೆಯುಸಿರೆಳೆದ ಮೊಮ್ಮಗನ ಶವವನ್ನು ಕಂಡು ಮೃತ ಅನಿಕ್ ಅಜ್ಜಿ ಆಘಾತಗೊಂಡು ಅಸುನೀಗಿದ್ದಾರೆ. ಮೊಮ್ಮಗನ ಶವ ಕಂಡು ಕುಸಿದು ಬಿದ್ದ ಅಜ್ಜಿ ಯಶೋಧಮ್ಮ ಸಾವನ್ನಪ್ಪಿದ್ದಾರೆ.
ಯಶೋಧಮ್ಮ (81 ವರ್ಷ) ಮೂಗ್ತಿಹಳ್ಳಿ ಸಣ್ಣಸಿದ್ದೇಗೌಡರ ಹಿರಿಯ ಮಗ ರಾಮೇಗೌಡರ ಪತ್ನಿ, ಅಪಘಾತದಲ್ಲಿ ಮೃತಪಟ್ಟ ಅನಿಕ್ ತಂದೆ ಪ್ರವೀಣ್ ಅವರ ದೊಡ್ಡಮ್ಮ. ಯಶೋಧಮ್ಮ ಅವರ ಅಂತ್ಯಕ್ರಿಯೆ ಮೂಗ್ತಿಹಳ್ಳಿಯಲ್ಲಿ ನೆರವೇರಲಿದೆ.
ಈ ಎರಡು ಸಾವುಗಳಿಂದ ಮೂಗ್ತಿಹಳ್ಳಿ ಮತ್ತು ಕೃಷ್ಣಗಿರಿಯಲ್ಲಿ ಶೋಕ ಮಡುಗಟ್ಟಿದೆ.