ಆಧಾರ್ ಕಾರ್ಡ್ನಲ್ಲಿ ಆಗಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಎರಡು ಮೂರು ಕೇಂದ್ರಗಳನ್ನಷ್ಟೇ ಸ್ಥಾಪಿಸಿದೆ. ಪ್ರತಿ ಕೇಂದ್ರದಲ್ಲಿ ದಿನವೊಂದಕ್ಕೆ ಕೇವಲ 25 ಜನರಿಗೆ ಟೋಕನ್ ನೀಡಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲಾಗುತ್ತಿದೆ. ಪ್ರತಿಯೊಂದು ಕೇಂದ್ರದಲ್ಲಿ ಟೋಕನ್ ಪಡೆಯಲು ನೂರಾರು ಜನ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿರುತ್ತಾರೆ. ಇದರಿಂದ ಜನರಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಜನರು ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ, ತಿದ್ದುಪಡಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಜನರ ತೊಂದರೆ ನಿವಾರಿಸಬೇಕು ಎಂದು ವಂದೇ ಮಾತರಂ ಯುವಕ ಸಂಘದ ರಾಜ್ಯಾಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಆಗ್ರಹಿಸಿದ್ದಾರೆ.
ಆಧಾರ್ ಕಾರ್ಡ್ ಮಾಡಿಸುವಾಗಲೇ ಜನರು ಮೂಲ ದಾಖಲಾತಿಗಳನ್ನು ನೀಡಿ ಕಾರ್ಡ್ ಮಾಡಿಸಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮಾಡುವವರ ಬೇಜಾವಬ್ದಾರಿ ಮತ್ತು ತಪ್ಪಿನಿಂದಾಗಿ ಆಧಾರ್ ಕಾರ್ಡ್ನಲ್ಲಿ ವ್ಯಕ್ತಿಗಳ ಮಾಹಿತಿ ತಪ್ಪಾಗಿ ನಮೂದಿಸಿರುತ್ತಾರೆ. ಹಾಗಾಗಿ ಜನರು ತಾವು ಮಾಡದ ತಪ್ಪಿಗೆ ದಿನಗಟ್ಟಲೇ ಕ್ಯೂನಲ್ಲಿ ನಿಂತು ಅವಕಾಶ ಸಿಗದೇ ಮನೆಗೆ ಮರಳುವುದು ಮತ್ತೆ ಮರುದಿನ ಬಂದು ಕ್ಯೂ ನಲ್ಲಿ ನಿಲ್ಲುವುದಾಗಿದೆ. ಇದರಿಂದ ಜನರ ಅಮೂಲ್ಯವಾದ ಸಮಯ ವ್ಯರ್ಥವಾಗುವ ಜೊತೆಗೆ ಆರ್ಥಿಕ ನಷ್ಟವುಂಟಾಗುತ್ತಿದೆ. ಸರ್ಕಾರದ ಪ್ರತಿನಿಧಿಗಳು ಮಾಡುವ ತಪ್ಪಿಗೆ ಜನರಿಗೆ ಯಾಕೆ ಶಿಕ್ಷೆ ಎಂದು ಪ್ರಶಾಂತ್ ಪ್ರಶ್ನಿಸಿದ್ದಾರೆ.
ಗ್ರಾಮೀಣ ಪ್ರದೇಶದಿಂದ ಬರುವ ರೈತರು, ಕಾರ್ಮಿಕರು ತಮ್ಮ ನಿತ್ಯದ ಕೆಲಸ ಬಿಟ್ಟು ಆಧಾರ್ ತಿದ್ದುಪಡಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸ್ಥಾಪಿಸಬೇಕು. ಆಧಾರ್ ಕಾರ್ಡ್ ಮಾಡುವ ಸಿಬ್ಬಂದಿಗಳಿಗೆ ಸರಿಯಾಗ ತರಬೇತಿ ನೀಡಿ ಲೋಪದೋಷಗಳು ಆಗದಂತೆ ಎಚ್ಚರವಹಿಸಲು ತಿಳಿಸಬೇಕು. ಆಧಾರ್ ಕಾರ್ಡ್ಗಳಲ್ಲಿ ಆಗುವ ಲೋಪದೋಷಗಳಿಗೆ ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರಶಾಂತ್ ಆಗ್ರಹಿಸಿದ್ದಾರೆ.