ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸೋಣ. ನಾನೇ ಪಕ್ಷ. ನನ್ನಂದಲೇ ಎಲ್ಲಾ ಎಂಬ ದುರಂಹಕಾರ ಪಟ್ಟವರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಚುನಾವಣೆಯಲ್ಲಿ ಕೆಲವೇ ಅಂತರದಿಂದ ಸೋಲು ಕಂಡಿದ್ದೇವಷ್ಟೇ. ಸಂಘಟನೆಯನ್ನು ಇನ್ನಷ್ಟು ಬಲಪಡಿಸೋಣ ಎಂದು ಬಿಜೆಪಿ ಪ್ರಕೋಸ್ಠದ ರಾಜ್ಯಾಧ್ಯಕ್ಷ ಭಾನುಪ್ರಕಾಶ್ ಕರೆ ನೀಡಿದರು.
ಅವರು ಮಂಗಳವಾರ ಮೂಡಿಗೆರೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಚುನಾವಣೆ ಬಗ್ಗೆ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ಕಾರ್ಯಕರ್ತರ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಉತ್ತಮ ಮತ ಗಳಿಸಿದ್ದರೂ ಕೆಲವೇ ಮತಗಳ ಅಂತರದಲ್ಲಿ ಸೋಲಿನ ಪಲಿತಾಂಶ ಬಂದಿರುವುದು ಎಲ್ಲರಿಗೂ ಬೇಸರ ತಂದಿದೆ. ಮುಂಬರುವ ಎಂ.ಪಿ, ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಗೆಲವು ಸಾಧಿಸಲು ಕಾರ್ಯಕರ್ತರು ಇನ್ನೂ ಹೆಚ್ಚಿನ ಶ್ರಮ ವಹಿಸಬೇಕೆಂದು ಮನವಿ ಮಾಡಿದರು.
ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಜಿಲ್ಲೆ ಮಾತ್ರವಲ್ಲ. ರಾಜ್ಯದಾಧ್ಯಂತ ಬಿಜೆಪಿಗೆ ಉತ್ತಮ ಮತ ಬಂದಿದೆ. ಪಕ್ಷದ ಸಿದ್ಧಾಂತ ಮರೆತು ಪಕ್ಷ ಬಿಟ್ಟು ಹೋದವರಿಗೆ ಹಾಗೂ ವ್ಯಕ್ತಿ ಮುಖ್ಯವೆಂದವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇಂದಿನಿಂದಲೇ ಪಣ ತೊಡಬೇಕೆಂದು ಹೇಳಿದರು.
ಸಭೆಯಲ್ಲಿದ್ದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ ಜನರಿಗೆ ಯಾರ್ಯಾರೋ ಮನೆಗಳಲ್ಲಿ ತಲುಪಿಸುವುದನ್ನು ತಡೆಯುವಲ್ಲಿ ವಿಫಲವಾಗಿದ್ದೇವೆ. ಅಲ್ಲದೇ ಪಕ್ಷಕ್ಕೆ ದ್ರೋಹ ಮಾಡಿದವರನ್ನು ಮುಲಾಜಿಲ್ಲದೇ ಉಚ್ಚಾಟಿಸಿ ಕ್ರಮ ಕೈಗೊಳ್ಳಬೇಕಿತ್ತು. ವ್ಯಾಪಕವಾದ ಅಪ ಪ್ರಚಾರ ಹಾಗೂ ಕುತಂತ್ರ ರಾಜಕಾರಣದಿಂದಾಗಿ ನಮ್ಮ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು. ಇದು ಮರುಕಳಿಸಬಾರದಂತೆ ಕಟ್ಟೆಚ್ಚರ ವಹಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಮುಖಂಡರಾದ ಪ್ರೇಮ್ಕುಮಾರ್, ನರೇಂದ್ರ, ದೀಪಕ್ ದೊಡ್ಡಯ್ಯ, ಸುರೇಂದ್ರ, ದಿನೇಶ್ ದೇವವೃಂದ, ಬಿ.ಎನ್.ಜಯಂತ್, ಅನುಕುಮಾರ್, ಕೆ.ಸಿ.ರತನ್, ದಿನೇಶ್ ಮುಗುಳುವಳ್ಳಿ, ಮನೋಜ್ ಹಳೆಕೋಟೆ, ಪ್ರಶಾಂತ್, ಸುಜಿತ್, ಪ್ರಮೋದ್ ಮತ್ತಿತರರಿದ್ದರು.