ಸಕಲೇಶಪುರ, ಆಲೂರು, ಅರೇಹಳ್ಳಿ ಭಾಗದಲ್ಲಿ ತೀವ್ರ ಉಪಟಳ ನೀಡುತ್ತಿದ್ದ ಓಲ್ಡ್ ಮಕ್ನಾ ಎಂದು ಹೆಸರಿಸಲ್ಪಟ್ಟಿದ್ದ ಕಾಡಾನೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಮಕ್ನಾ(ಕೋರೆಗಳಿಲ್ಲದ ಗಂಡು ಆನೆ) ಯಾವ ಗುಂಪುಗಳೊಂದಿಗೂ ಗುರುತಿಸಿಕೊಳ್ಳದೇ ಒಂಟಿಯಾಗಿ ತಿರುಗುತ್ತಿತ್ತು. ಇತ್ತೀಚೆಗೆ ಸಕಲೇಶಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೊಲ್ಲಹಳ್ಳಿ ಎಂಬಲ್ಲಿ ಸರ್ಕಾರಿ ಪಡಿತರ ಅಂಗಡಿಯಿಂದ ಅಕ್ಕಿಮೂಟೆಯನ್ನು ಎಳೆದು ತಂದು ರಸ್ತೆಪಕ್ಕದಲ್ಲಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೇ ಆನೆ ಕಳೆದ ವರ್ಷ ಬೇಲೂರು ತಾಲ್ಲೂಕಿನ ಅನಘಟ್ಟ ಎಂಬಲ್ಲಿ ಇದೇ ರೀತಿ ಪಡಿತರ ಅಂಗಡಿಯಿಂದ ಅಕ್ಕಿಮೂಟೆಯನ್ನು ಹೊತ್ತೊಯ್ದು ತಿಂದಿತ್ತು.
ಇತ್ತೀಚೆಗೆ ಸಕಲೇಶಪುರ ಸುತ್ತಮುತ್ತ ಉಪಟಳ ನೀಡುತ್ತಿರುವ ಮೂರು ಕಾಡಾನೆಗಳಿಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು. ಅದರಲ್ಲಿ ಒಂದು ಮಕ್ನಾ ಆನೆ ಸೆರೆಹಿಡಿಯಲು ಸರ್ಕಾರ ಆದೇಶ ನೀಡಿತ್ತು. ಗುರವಾರವೇ ಮಕ್ನಾ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಕಾರ್ಯಾಚರಣೆಗೆ ಬಂದಿದ್ದ ಎರಡು ಸಾಕಾನೆಗಳು ಆಯಾಸಗೊಂಡಿದ್ದರಿಂದ ದುಬಾರೆ ಆನೆ ಶಿಬಿರದಿಂದ ಮತ್ತೆರಡು ಆನೆಗಳನ್ನು ಕರೆಸಲಾಗಿತ್ತು.
ಶುಕ್ರವಾರ ಬಾಗೆ ಸಮೀಪ ಟಾಟಾ ಎಸ್ಟೇಟ್ ನಲ್ಲಿ ಮಕ್ನಾ ಆನೆ ಇರುವುದನ್ನು ಅರಿತು ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಆನೆಯನ್ನು ಸೆರೆಹಿಡಿಯಲು ಮೂರು ಬಾರಿ ಅರವಳಿಕೆ ಚುಚ್ಚುಮದ್ದು ನೀಡಬೇಕಾಗಿ ಬಂತು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಪ್ಪಿಸಿಕೊಂಡು ಹೋಗುತ್ತಿದ್ದ ಆನೆಯನ್ನು ಹೊಸೂರು ಎಸ್ಟೇಟ್ ಬಳಿ ಸಾಕಾನೆಗಳು ಸುತ್ತುವರಿದವು. ಅಲ್ಲಿ ಸಾಕಾನೆಗಳು ಸತತ 2 ತಾಸುಗಳ ಕಾಲ ಕಾಡಾನೆಯೊಂದಿಗೆ ಕಾದಾಟ ನಡೆಸಿದ್ದವು. ನಂತರ ಆನೆಯನ್ನು ಸೆರೆಹಿಡಿದು ಕ್ರೇನ್ ಮೂಲಕ ಲಾರಿಗೆ ಹತ್ತಿಸಲಾಯಿತು.
ಎರಡನೇ ಬಾರಿ ಸೆರೆ : ಬಲಿಷ್ಠವಾದ ಈ ಕಾಡಾನೆಯನ್ನು ಈಗ್ಗೆ ಎರಡು ವರ್ಷಗಳ ಹಿಂದೆ ಸೆರೆಹಿಡಿಯಲಾಗಿತ್ತು. ಆದರೆ ಅದು ಮತ್ತೆ ಇದೇ ಪ್ರದೇಶಕ್ಕೆ ವಾಪಾಸ್ಸಾಗಿತ್ತು. ಹಾಗಾಗಿ ಈ ಬಾರಿ ಈ ಆನೆಯನ್ನು ಮತ್ತಿಗೋಡು ಆನೆ ಶಿಬಿರಕ್ಕೆ ಹೋಯ್ದು ಅಲ್ಲಿ ಅದನ್ನು ಪಳಗಿಸುವ ಕಾರ್ಯ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.