ತುಂಗಾ ನದಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಶೃಂಗೇರಿ ತಾಲ್ಲೂಕಿನ ನೆಮ್ಮಾರು ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಶೃಂಗೇರಿ ಖಾಸಗಿ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿಗಳು ನೆಮ್ಮಾರು ಸಮೀಪದ ತುಂಗಾ ನದಿಯ ತೂಗುಸೇತುವೆ ಬಳಿ ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೃತರನ್ನು ಹರಿಹರಪುರದ ರಕ್ಷಿತ್ ಮತ್ತು ಶೃಂಗೇರಿ ಸಮೀಪದ ಸುಂಕದಮಕ್ಕಿಯ ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಈಜುಬಾರದ ರಕ್ಷಿತ್ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ರಕ್ಷಿಸಲೆಂದು ಹೋದ ಪ್ರಜ್ವಲ್ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿರುತ್ತಾರೆ.
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.