ಕಾಡಾನೆಯೊಂದು ಮನೆಗೆ ನುಗ್ಗಿ ಮನೆಯ ಪೋರ್ಟಿಕೋ, ಕಿಟಕಿ, ಟಿ.ವಿ. ಪುಡಿಗೈದಿರುವ ಘಟನೆ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿ ಕ್ಯಾಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ 11 ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಕ್ಯಾಮನಹಳ್ಳಿ ಗ್ರಾಮದ ಕೃಷಿ ಶಂಕ್ರಪ್ಪ ಎನ್ನುವವರ ಮನೆ ಸಮೀಪದ ಗೇಟ್ ಮುರಿದು ಒಳನುಗ್ಗಿರುವ ಕಾಡಾನೆ ಮನೆ ಮುಂದಿನ ಪೋರ್ಟಿಕೋವನ್ನು ಜಖಂಗೊಳಿಸಿದೆ. ನಂತರ ಮನೆಯ ಮುಂಭಾಗದ ದೊಡ್ಡ ಗಾತ್ರದ ಕಿಟಕಿಯನ್ನು ನೂಕಿ ಪುಡಿಗೈದಿದೆ. ಮತ್ತೊಂದು ಕಿಟಕಿಯ ಗಾಜು ಪುಡಿಗೈದಿದೆ. ಪರಿಣಾಮ ಮನೆಯೊಳಗಿದ್ದ ಟಿ.ವಿ. ಮತ್ತು ಟಿ.ವಿ. ಸ್ಟ್ಯಾಂಡ್ ಪುಡಿಯಾಗಿವೆ. ಮನೆ ಬಹುತೇಕ ಜಖಂಗೊಂಡಿದ್ದು, ಮನೆಯ ಮಾಲೀಕರಿಗೆ ಇದರಿಂದ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
ಮನೆಯಲ್ಲಿ ಮಲಗಿದ್ದವರು ಶಬ್ದವನ್ನು ಕೇಳಿ ಗಾಬರಿಯಿಂದ ಎದ್ದು ನೋಡುವಾಗ ಆನೆ ಮನೆಯ ಮುಂಭಾಗದಲ್ಲಿ ನಿಂತು ಮನೆಯನ್ನು ಜಖಂಗೊಳಿಸುತ್ತಿತ್ತು. ಮನೆಯವರು ಎಚ್ಚರವಾಗಿ ಕೂಗಿಕೊಂಡಾಗ ಕಾಡಾನೆ ಸ್ಥಳದಿಂದ ಕಾಲ್ಕಿತ್ತಿದೆ ಎಂದು ತಿಳಿದುಬಂದಿದೆ.
ಮನೆಯ ಟೆರೆಸ್ ಮೇಲೆ ಭತ್ತವನ್ನು ಮೂಟೆಯಲ್ಲಿ ಕಟ್ಟಿಟ್ಟಿದ್ದು, ಆನೆ ಆ ಭತ್ತವನ್ನು ತಿನ್ನಲು ಪ್ರಯತ್ನಿಸಿ ಈ ರೀತಿ ಮನೆಯನ್ನು ಜಖಂಗೊಳಿಸಿದೆ ಎನ್ನಲಾಗುತ್ತಿದೆ.
ಈ ಘಟನೆಯಿಂದ ಸುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದು, ಇಷ್ಟು ದಿವಸ ತೋಟಗದ್ದೆಗಳಿಗೆ ದಾಳಿ ಮಾಡಿ ಬೆಳೆಗಳನ್ನು ನಾಶಮಾಡುತ್ತಿದ್ದ ಕಾಡಾನೆಗಳು ಈಗ ಮನೆಯನ್ನೇ ಕೆಡವಲು ಪ್ರಯತ್ನಿಸಿರುವುದು ಜನರನ್ನು ಭಯಭೀತರನ್ನಾಗಿಸಿದೆ.