ಇದು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ವ್ಯಾಪ್ತಿಯ ಗಿರಿಜನ ಕುಟುಂಬಗಳ ಕಣ್ಣೀರ ಕತೆ. ರಸ್ತೆ ಸೌಕರ್ಯ ಇಲ್ಲದೇ ತೆಪ್ಪದಲ್ಲಿ ಹೊಳೆದಾಟಿ ಹೊರಪ್ರಪಂಚದ ಸಂಪರ್ಕ ಸಾಧಿಸಬೇಕಾದ ಕಷ್ಟದ ಬದುಕು ನಡೆಸುತ್ತಿದ್ದಾರೆ ಇಲ್ಲಿನ ಕುಟುಂಬಗಳು.
ಅಮ್ತಿ ಹೊಳೆಕೂಡಿಗೆ ಗ್ರಾಮದ ಮಲೆಕುಡಿಯ ಕುಟುಂಬಗಳು ತಮ್ಮ ಅಳಲನ್ನು ಯಾರೊಂದಿಗೂ ಹೇಳಿಕೊಂಡರೂ ಪರಿಹಾರ ಸಿಕ್ಕಿಲ್ಲ.
ಸರ್ಕಾರ ಗಿರಿಜನರ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನವನ್ನು ವಿನಿಯೋಗಿಸುತ್ತದೆ. ಆದರೆ ಬಾಳೂರು ಹೋಬಳಿಯ ಈ ಗ್ರಾಮದ ಗಿರಿಜನ ಕುಟುಂಬಗಳಿಗೆ ಮಾತ್ರ ಅಭಿವೃದ್ಧಿಯ ಭಾಗ್ಯ ಕಂಡಿಲ್ಲ.
ರಸ್ತೆ ಸೌಕರ್ಯ ಕಲ್ಪಿಸದೇ ಇರುವುದರಿಂದ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ಅಮ್ತಿ ಹೊಳೆಕೂಡಿಗೆ ಗ್ರಾಮದ ಮಲೆಕುಡಿಯ ಕುಟುಂಬಗಳು ನಿರ್ಧರಿಸಿವೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮಲೆಕುಡಿಯ ಕುಟುಂಬದ ಮುಖ್ಯಸ್ಥ ಸತೀಶ್, ಕೂವೆ ಸಮೀಪ ಅಮ್ತಿ ಹೊಳೆಕೂಡಿಗೆಯಲ್ಲಿ ನಾಲ್ಕು ಮಲೆಕುಡಿಯ ಕುಟುಂಬಗಳು ವಾಸವಾಗಿದ್ದು ಮನೆಗಳ ಸುತ್ತ ಭದ್ರಾನದಿ ಆವರಿಸಿರುವುದರಿಂದ ಮುಖ್ಯ ರಸ್ತೆಗೆ ಸಂಪರ್ಕ ಇಲ್ಲದಂತಾಗಿದೆ. ಮನೆ ಕಟ್ಟಲು ಮರಳು, ಇಟ್ಟಿಗೆ ಮುಂತಾದ ಕಚ್ಚಾವಸ್ತುಗಳನ್ನು ತೆಪ್ಪದಲ್ಲೆ ತರಬೇಕಾಗಿದೆ. 2015 ರಿಂದ ರಸ್ತೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದರೂ ರಸ್ತೆ ಅಥವಾ ತೂಗು ಸೇತುವೆ ನಿರ್ಮಾಣವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಬಂದರೂ ಕೇವಲ ಭರವಸೆ ನೀಡಿ ಹೋಗುತ್ತಾರೆ. ಜನಪ್ರತಿನಿಧಿಗಳ, ಅಧಿಕಾರಿಗಳ ಭರವಸೆ ಕೇಳಿ ಸಾಕಾಗಿದೆ. ಆದ್ದರಿಂದ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಚಿತ್ರ ವರದಿ : ನಂದೀಶ್ ಬಂಕೇನಹಳ್ಳಿ
ನಿರಂತರ ಸುದ್ದಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/DDXjmfQaBa0HJQqmKf7y89