ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಹಾಗೂ ರೈತರ ಏಳಿಗೆಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಅದರ ಉಪಯೋಗ ರಾಜ್ಯದ ಜನತೆ ಪಡೆದಿದ್ದಾರೆ. ಹಾಗಾಗಿ ಈ ಬಾರಿ ಜೆಡಿಎಸ್ ಬಹುಮತ ಪಡೆಯುವುದು ಶತಸಿದ್ಧ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬಿಜೆಪಿ ತೊರೆದ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದರು.
ಕುಮಾರಣ್ಣ ಸಿಎಂ ಆಗಿದ್ದಾಗ ಗ್ರಾಮ ವಾಸ್ತವ್ಯದ ಮೂಲಕ ಜನರ ಕಷ್ಟ ಅರಿತಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಸಮಿಶ್ರ ಸರಕಾರ ನಡೆಸಿದಾಗ, ರೈತರಿಗೆ ಕೊಟ್ಟ ಮಾತಿನಂತೆ ವಿರೋಧದ ನಡುವೆಯೂ 25ಸಾವಿರ ಕೋಟಿ ರೂ ರೈತರ ಸಾಲ ಮನ್ನ ಮಾಡಿದ್ದಾರೆ. ಕಳಸ ತಾಲೂಕಾಗಿ ಘೋಷಣೆ ಮಾಡಿದರು. ಅಲ್ಲದೇ ಭದ್ರ ಮೇಲ್ದಂಡೆಯಲ್ಲಿರುವ ಜನರನ್ನು ಒಕ್ಕಲೆಬ್ಬಿಸುವಾಗ ಹಾಗೂ ಇನಾಂ ಭೂಮಿ ಸಮಸ್ಯೆ ಎದುರಾದಾಗ ರಾತ್ರಿ 2 ಗಂಟೆಗೆ ಬಂದು ಸಮಸ್ಯೆ ಬಗೆಹರಿಸಿದ್ದರು. ಇದರಿಂದಾಗಿ ಬಿಜೆಪಿ, ಕಾಂಗ್ರೆಸ್ನಿಂದ ದಿನಕ್ಕೆ 300ರಿಂದ 400 ಮಂದಿ ಜೆಡಿಎಸ್ಗೆ ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ಬಲ ಬಂದಿದೆ ಎಂದು ಹೇಳಿದರು.
ಅತಿವೃಷ್ಟಿಯಿಂದ ಬೆಳೆ ನಾಶ ಪರಿಹಾರಕ್ಕೆ ಎಂ.ಪಿ.ಕುಮಾರಸ್ವಾಮಿ ಅವರು ಬೆಂಗಳೂರು ಗಾಂಧಿ ಪ್ರತಿಮೆ ಮುಂದೆ ಕುಳಿತು ಧರಣಿ ನಡೆಸಿ ಬೆಳೆಗಾರರಿಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಸದನದಲ್ಲಿ ಚರ್ಚಿಸಿ ಬಿಪಿಎಲ್ ಕಾರ್ಡ್ ರದ್ಧತಿ ತಡೆದಿದ್ದಾರೆ. ಕಸ್ತೂರಿ ರಂಗನ್ ಹಾಗೂ ಕಾಡಾನೆ ಹಾವಳಿ ತಪ್ಪಿಸಲು ಕೂಡ ಸದನದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಇಂತಹ ಜನಪರ ಕಾಳಜಿಯುಳ್ಳ ಎಂಪಿಕೆಯನ್ನು ಸೋಲಿಸಲು ಬಿಜೆಪಿಯವರು ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲದಿದ್ದರೂ ಪರವಾಗಿಲ್ಲ. ಕಾಂಗ್ರೆಸ್ಗೆ ಮತ ಹಾಕುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೂ ಎಂಪಿಕೆ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ತ್ರಿಪುರ ಗ್ರಾ.ಪಂ. ಸದಸ್ಯೆ ಶಾಂತಲಾ ನಾಗೇಶ್ ಸೇರಿದಂತೆ ಅನೇಕ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಬಣಕಲ್ ಹೋಬಳಿ ಅಧ್ಯಕ್ಷ ಸಂದೇಶ್ ವಹಿಸಿದ್ದರು. ಮುಖಂಡರಾದ ನಿಡುವಾಳೆ ಚಂದ್ರು, ಸುಧಾ ಮಂಜುನಾಥ್, ಜಗದೀಶ್, ಅಶೋಕ್ಗೌಡ, ಶಾಕೀರ್ ಹುಸೇನ್, ಸುಕೇಶ್, ಹರೀಶ್, ದಿವಿನ್, ಲೋಹಿತ್, ಪ್ರವೀಣ್, ಸಂಜೀವ, ರೋಹನ್ ಮತ್ತಿತರರಿದ್ದರು.