ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯ, ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಹೂವಪ್ಪ ಕಾಂಗ್ರೇಸ್ ತೊರೆದು ಜೆ.ಡಿ.ಎಸ್. ಪಕ್ಷವನ್ನು ಸೇರಲು ನಿರ್ಧರಿಸಿದ್ದಾರೆ.
ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದ ಎಂ.ಸಿ. ಹೂವಪ್ಪ ಈಗ ಕಾಂಗ್ರೇಸ್ ತೊರೆಯಲು ನಿರ್ಧರಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ನಲ್ಲಿ ದುಡಿಯುವ ಕಾರ್ಯಕರ್ತರಿಗೆ ಯಾವುದೇ ಬೆಲೆ ಸಿಗುವುದಿಲ್ಲ. ನಯನಾ ಮೋಟಮ್ಮ ಅವರಿಗೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದಾಗ ಸೌಜನ್ಯಕ್ಕೂ 5 ಮಂದಿ ಆಕಾಂಕ್ಷಿಗಳನ್ನು ಭೇಟಿ ಮಾಡದೇ ಸಂಪೂರ್ಣ ಕಡೆಗಣಿಸಲಾಗಿದೆ. ಮೂಡಿಗೆರೆಯಲ್ಲಿ ಮೋಟಮ್ಮ ಅವರೇ ಹೈ ಕಮಾಂಡ್ ಆಗಿಬಿಟ್ಟಿದ್ದಾರೆ. ಸ್ವಾರ್ಥ ರಾಜಕಾರಣ ಮಾಡುತ್ತಾ ಕುಟುಂಬ ಬೆಳೆಸಲು ಕಾಂಗ್ರೆಸ್ ಪಕ್ಷವನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ಕುಟುಂಬದವರಿಗೆ ಟಿಕೇಟ್ ಸಿಗದಿದ್ದರೆ ವಿರೋಧ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ನಡೆಸುತ್ತಾರೆ. ದಲಿತರನ್ನು ಕೇವಲವಾಗಿ ನೋಡುತ್ತಾರೆ. ಇದರಿಂದ ಬೇಸತ್ತು ಪಕ್ಷ ತೊರೆದು ತನ್ನ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಗೊಳ್ಳಲು ನಿರ್ಧಾರಿಸಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಸಾವಿರಾರು ಮಂದಿ ದಲಿತರಿದ್ದಾರೆ. ಸ್ಥಳೀಯ ದಲಿತರನ್ನು ಕಡೆಗಣಿಸಲಾಗಿದೆ. ಇವರಿಗೆ ಮೂಡಿಗೆರೆ ಕ್ಷೇತ್ರದ ಜನರು ಬೆಂಬಲಿಸುವುದಿಲ್ಲ ಎಂದ ಅವರು, 1947ರ ಕಾಂಗ್ರೆಸ್ ಬಸ್ಸು ಇದೀಗ ಆಯಸ್ಸು ಕಳೆದುಕೊಂಡು ಗುಜಿರಿ ಬಸ್ ಆಗಿಬಿಟ್ಟಿದೆ. ಅದಕ್ಕೆ ಸುಣ್ಣ ಬಣ್ಣ ಬಳಿದು ಓಡಿಸಲಾಗುತ್ತಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವ್ಯಗ್ಯವಾಡಿದರು.
ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಎಸ್ಸೀ ಘಟಕದ ಅಧ್ಯಕ್ಷ ರಾಕೇಶ್, ಹಿರಿಯ ಮುಖಂಡ ದೇಜಪ್ಪ, ಎಂ.ಎಸ್.ಕೃಷ್ಣ, ಅಶೋಕ್ ಆಲ್ದೂರು, ಹೇಮಂತ್ಕುಮಾರ್, ತೀರ್ಥಕುಮಾರ್, ಹಸನಬ್ಬ ಉಪಸ್ಥಿತರಿದ್ದರು.