ವಿಧಾನಸಭಾ ಚುನಾವಣೆ ಕಾವು ಏರುತ್ತಿರುವ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿ ಜೆ.ಡಿ.ಎಸ್. ಮುಖಂಡ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೆಗೌಡರು ತಮ್ಮ ಬೆಂಬಲಿಗರೊಂದಿಗೆ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಜೆ.ಡಿ.ಎಸ್. ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಎಸ್.ಎಲ್. ಬೋಜೇಗೌಡರು ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಒಂದಷ್ಟು ಜನ ಕಾರ್ಯಕರ್ತರನ್ನು ಸುತ್ತಲೂ ಸೇರಿಸಿಕೊಂಡು ಮಾತನಾಡಿರುವ ವಿಡಿಯೋ ಮಾಧ್ಯಮಕ್ಕೆ ಲಭ್ಯವಾಗಿದೆ. ಆ ವಿಡಿಯೋದಲ್ಲಿ ಬೋಜೇಗೌಡರು ತಮ್ಮ ಎದುರಿಗಿರುವರೊಂದಿಗೆ ಮಾತನಾಡುತ್ತಾ. ಈ ಬಾರಿ ನೀವೆಲ್ಲಾ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ನವರಿಗೆ ಬೆಂಬಲ ನೀಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ಕೆಲ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ ಬೋಜೇಗೌಡರು ಅದೆಲ್ಲಾ ಗೊತ್ತಿಲ್ಲ ಈ ಸರ್ತಿ ನಿವೆಲ್ಲಾ ಸೇರಿ ಕಾಂಗ್ರೇಸ್ ಗೆ ಓಟ್ ಹಾಕಬೇಕು. ಕಾಂಗ್ರೇಸ್ ಗೆಲ್ಸಿ ಬಾಕಿದು ಆಮೇಲೆ ನೋಡ್ಕೊಳ್ಳೋಣ ಎಂದು ನೇರವಾಗಿ ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಾತನಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ತಿಮ್ಮಾಶೆಟ್ಟಿಯವರು ಜೆ.ಡಿ.ಎಸ್. ಅಭ್ಯರ್ಥಿಯಾಗಿ ಕಣದಲ್ಲಿದ್ದು, ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಜೆ.ಡಿ.ಎಸ್. ಸಂಘಟನೆಗೆ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಅವರನ್ನು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನಾಗಿಸಲು ಬೋಜೇಗೌಡರೇ ಪ್ರಮುಖ ಕಾರಣಕರ್ತರು ಎನ್ನಲಾಗಿದೆ.
ಇದೀಗ ಬೋಜೇಗೌಡರ ಹೇಳಿಕೆ ನೋಡಿದರೆ ತಿಮ್ಮಾಶೆಟ್ಟಿಯವರನ್ನು ಕ್ಷೇತ್ರದಲ್ಲಿ ಹರಕೆಯ ಕುರಿ ಮಾಡಿದಂತೆ ತೋರುತ್ತಿದೆ.
ಇದೀಗ ಬೋಜೇಗೌಡರು ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲಿಸಿ ಎಂದು ಬೆಂಬಲಿಗರಿಗೆ ಹೇಳುತ್ತಿರುವುದು ಗಮನಿಸಿದರೆ ಕ್ಷೇತ್ರದಲ್ಲಿ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ.ಸೋಲಿಸಲು ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ನಡುವೆ ಒಳ ಒಪ್ಪಂದವೇನಾದರೂ ನಡೆದಿದೆಯಾ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಹೆಚ್.ಡಿ. ಕುಮಾರಸ್ವಾಮಿಯವರು ಬಲಗೈಯಂತೆ ಸದಾ ಅವರ ಜೊತೆಗಿರುವ ಎಸ್.ಎಲ್. ಬೋಜೇಗೌಡರ ಈ ಮಾತುಗಳು ರಾಜ್ಯಮಟ್ಟದಲ್ಲಿಯೂ ಜೆ.ಡಿ.ಎಸ್. ವರಿಷ್ಟರಿಗೆ ಮುಜುಗರಕ್ಕೀಡಾಗುವಂತೆ ಮಾಡಿದೆ ಮಾತ್ರವಲ್ಲ ಕ್ಷೇತ್ರದಲ್ಲಿ ಮತ್ತು ಜಿಲ್ಲೆಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತರು ಮತ್ತು ಮುಖಂಡರನ್ನು ಗೊಂದಲಕ್ಕೆ ಸಿಲುಕಿಸಿದೆ.