ಕಡೂರು ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿಯಾಗಿ ವೈ.ಎಸ್.ವಿ. ದತ್ತಾ ಮಂಗಳವಾರ ಕಡೂರಿನಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಉಪಸ್ಥಿತರಿದ್ದು ದತ್ತಾ ಅವರಿಗೆ ಶುಭ ಹಾರೈಸಿದರು. ಜೊತೆಗೆ ಹೆಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಅವರು ದತ್ತಾ ಅವರಿಗೆ ಸಾಥ್ ನೀಡಿದರು.
ವೈ.ಎಸ್.ವಿ.ದತ್ತ ಅವರು ನಾಮಪತ್ರ ಸಲ್ಲಿಸಲು ಕಡೂರು ತಾಲೂಕು ಕಚೇರಿಗೆ ಎತ್ತಿನ ಗಾಡಿಯಲ್ಲಿ ಹೊರಟು ಗಮನ ಸೆಳೆದಿದ್ದಾರೆ.ದತ್ತಾಗೆ ಜೊತೆಗೆ ಎತ್ತಿನ ಗಾಡಿಯಲ್ಲಿ ಪ್ರಜ್ವಲ್ ರೇವಣ್ಣ ಅವರು ಸಾಥ್ ನೀಡಿದರು. ಈ ವೇಳೆ ಅವರಿಗೆ 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಬೆಂಬಲ ನೀಡಿದ್ದಾರೆ. ಈ ಎತ್ತಿನ ಗಾಡಿ ಮೆರವಣಿಗೆ ವೇಳೆ 1 ಕಿ.ಮೀಟರ್ವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಟ ನಡೆಸಿದರು. ಕಡೂರು ಪಟ್ಟಣದಲ್ಲಿ 39 ಡಿಗ್ರಿ ಸೆಲ್ಸಿಯಸ್ ಸುಡು ಬಿಸಿಲಿನಲ್ಲೂ ನೆರೆದ ಜನ ದತ್ತಾ ಅವರ ಪರ ಜೈಕಾರವನ್ನು ಹಾಕಿದರು.
ಜೆ.ಡಿ.ಎಸ್.ತೊರೆದು ಕಾಂಗ್ರೇಸ್ ತೊರೆದಿದ್ದ ದತ್ತಾ ಕಾಂಗ್ರೇಸ್ ನಲ್ಲಿ ಟಿಕೆಟ್ ಸಿಗದೇ ಇದ್ದಾಗ ಪಕ್ಷೇತರರಾಗಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದರು. ನಂತರ ದೇವೇಗೌಡರ ಅಪೇಕ್ಷೆಯ ಮೇರೆಗೆ ಮರಳಿ ಜೆ.ಡಿ.ಎಸ್.ಗೆ ಸೇರಿ ಕೊನೆ ಕ್ಷಣದಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯಾಗಿದ್ದಾರೆ.
ದಿನದಿಂದ ದಿನಕ್ಕೆ ದತ್ತಾ ಇಲ್ಲಿ ಜನಬೆಂಬಲವನ್ನು ಪಡೆದು ಪ್ರಬಲ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದಾರೆ.