ಮೂಡಿಗೆರೆ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾಗಿ ಎಂ.ಪಿ. ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಿದ ನಂತರ ಪಕ್ಷದೊಳಗೆ ಅಸಮಧಾನ ಸ್ಪೋಟಗೊಂಡಿದೆ.
ಮೊದಲ ಪಟ್ಟಿಯಲ್ಲಿ ಬಿ.ಬಿ.ನಿಂಗಯ್ಯನವರಿಗೆ ಘೋಷಣೆಯಾಗಿದ್ದ ಟಿಕೆಟ್ ಇದೀಗ ಬಿ.ಜೆ.ಪಿ. ತೊರೆದು ಬಂದಿರುವ ಶಾಸಕ ಎಂ.ಪಿ. ಕುಮಾರಸ್ವಾಮಿಯವರ ಪಾಲಾಗಿದೆ.
ಈ ವಿಚಾರವಾಗಿ ಪಕ್ಷದಲ್ಲಿ ಸ್ಪಷ್ಟವಾದ ಎರಡು ಬಣಗಳು ಸೃಷ್ಟಿಯಾಗಿದ್ದು ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಎಂ.ಪಿ.ಕುಮಾರಸ್ವಾಮಿಯವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆದರೆ ಬಿ.ಬಿ.ನಿಂಗಯ್ಯ ಸೇರಿದಂತೆ ಅವರ ಬೆಂಬಲಿಗ ಅನೇಕ ಮುಖಂಡರು ಕಾರ್ಯಕರ್ತರು ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಿರುವುದಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮೊನ್ನೆ ಆಲ್ದೂರಿನಲ್ಲಿ ನಾಲ್ಕು ಹೋಬಳಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ನಿಂಗಯ್ಯನವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಇವತ್ತು ಮೂಡಿಗೆರೆ ಜೆ.ಡಿ.ಎಸ್. ಕಛೇರಿಯಲ್ಲಿ ಸಭೆ ಸೇರಿದ್ದ ನೂರಾರು ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ನಿಂಗಯ್ಯನವರ ಬೆಂಬಲಿಗರು ಮನನೊಂದು ಕಣ್ಣೀರು ಹಾಕಿದ್ದಾರೆ.
ಕುಮಾರಸ್ವಾಮಿಯವರು ಪಕ್ಷದ ಬಂದ ತಕ್ಷಣ ಅವರಿಗೆ ಟಿಕೆಟ್ ನೀಡಿರುವುದು ತಪ್ಪು, ಅವರು ಸೌಜನ್ಯಕ್ಕಾದರೂ ನಿಂಗಯ್ಯನವರನ್ನು ಭೇಟಿ ಮಾಡಿ ಮಾತನಾಡಿಲ್ಲ. ಪಕ್ಷ ಸಂಘಟನೆಗಾಗಿ ತಮ್ಮ ಕೈಯಿಂದ ಹಣವನ್ನು ವೆಚ್ಚಮಾಡಿರುವ ನಿಂಗಯ್ಯನವರು ಕ್ಷೇತ್ರದಲ್ಲಿ ಕಟ್ಟಿಬೆಳೆಸಿದ ಪಕ್ಷಕ್ಕೆ ಇದೀಗ ಕುಮಾರಸ್ವಾಮಿಯವರು ಅಭ್ಯರ್ಥಿಯಾಗಿರುವುದನ್ನು ನಾನು ವಿರೋಧಿಸುತ್ತೇವೆ ಎಂದು ನಿಂಗಯ್ಯನವರ ಬೆಂಬಲಿಗ ಮುಖಂಡರು ತಿಳಿಸಿದ್ದಾರೆ.
ಈ ನಡುವೆ ಬಿ.ಬಿ.ನಿಂಗಯ್ಯನವರು ಪಕ್ಷ ಮೊದಲ ಪಟ್ಟಿಯಲ್ಲಿ ನನ್ನ ಹೆಸರನ್ನು ಘೋಷಣೆ ಮಾಡಿದೆ. ಬುಧವಾರ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ.
ಒಟ್ಟಾರೆ ಅಭ್ಯರ್ಥಿ ವಿಚಾರವಾಗಿ ಮೂಡಿಗೆರೆ ಜೆ.ಡಿ.ಎಸ್. ಒಡೆದ ಮನೆಯಂತಾಗಿದೆ. ನಿಂಗಯ್ಯನವರ ಮತ್ತು ಅವರ ಬೆಂಬಲಿಗರ ಮುಂದಿನ ರಾಜಕೀಯ ನಡೆ ಕುತೂಹಲ ಕೆರಳಿಸಿದೆ.